ಮಂಗಳೂರು,ಮೇ.10: ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಸಮೀಪದ ಕಾಯರ್ಗೋಳಿ ಎಂಬಲ್ಲಿ ಮೋಟಾರು ಬೈಕಿನಲ್ಲಿ ತಲವಾರಿನ ಸಹಿತ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳನ್ನು ಬೆಳ್ಮ ಗ್ರಾಮದ ರೆಂಜಾಡಿ ಕಂಡಿಲಾ ಹೌಸ್ ನಿವಾಸಿ ಮಹಮ್ಮದ್ ಇಮ್ತಿಯಾಝ್ (27),ಮಂಜೇಶ್ವರ,ಉಪ್ಪಳದ ಮಹಿ ನಗರ ನಿವಾಸಿ ಮಹಮ್ಮದ್ ಸಿರಾಜ್(23),ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ನಿವಾಸಿ ಹಫೀಝ್ ಯಾನೆ ಅಭಿ(30)ಎಂದು ಗುರುತಿಸಲಾಗಿದೆ.
ಮಂಗಳವಾರದಂದು ಕುರ್ನಾಡುವಿನ ಮಿತ್ತಕೋಡಿ ಮತ್ತು ಹೂವಿನಕೊಪ್ಪಳದಿಂದ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಕೊಂಡೊಯ್ಯುತ್ತಿರುವ ಬಗೆಗೆ ಖಚಿತ ಮಾಹಿತಿ ಪಡೆದ ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕ ಅಶೋಕ್ ಪಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಮುಡಿಪುವಿನ ಕಾಯರ್ಗೋಳಿ ಎಂಬಲ್ಲಿ ವಾಹನ ತಪಾಸಣೆ ನಡೆಸುತಿದ್ದ ಸಮಯದಲ್ಲಿ ಬೋಳಿಯಾರು ಕಡೆಯಿಂದ ಎರಡು ಮೋಟಾರ್ ಬೈಕ್(ಕೆಎಲ್-14ಜಿ-0301 ಮತ್ತು ಕೆಎ-19-ಇಕೆ-8420)ನಲ್ಲಿದ್ದ ಯುವಕರು ಪೊಲೀಸರನ್ನು ಕಂಡು ಹೆದರಿದ್ದು ಅವರನ್ನು ತಪಾಸಣೆ ನಡೆಸಿದಾಗ 1 ಕೆ.ಜಿ ನೂರು ಗ್ರಾಂ ಗಾಂಜಾ ಮತ್ತು ಒಂದು ಹರಿತವಾದ ತಲವಾರು ಮತ್ತು ಕೃತ್ಯಕ್ಕೆ ಬಳಸಲಾದ ಎರಡೂ ಮೋಟಾರ್ ಬೈಕ್ಗಳನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದಾನೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ,ಡಿಸಿಪಿ ಶಾಂತರಾಜು,ಎಸಿಪಿ ಸಂಜೀವ ಪಾಟೀಲ್ರವರ ಮಾರ್ಗದರ್ಶನದಲ್ಲಿ ಕೊಣಾಜೆ ಪಿಎಸ್ಐ ಸುಧಾಕರ್,ಎಎಸ್ಐ ಭಾಸ್ಕರ್ ಕಾಮತ್,ಪಿಸಿಗಳಾದ ಸಂತೋಷ್ ಸಿ.ಜೆ, ಚಂದ್ರಶೇಖರ್, ಶಿಪ್ರಸಾದ್, ರಾಜೇಶ್, ದುರ್ಗಾಪ್ರಸಾದ್, ಮಂಜುನಾಥ್, ಪ್ರದೀಪ್, ಗೃಹರಕ್ಷಕ ಸಿಬ್ಬಂದಿ ಗಿರೀಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.