ಬೆಳ್ತಂಗಡಿ, ಮೇ .09 : ಕಳೆದ ಮಾರ್ಚ್ 30ರಂದು ನಡೆದಿದ್ದ ಉಜಿರೆ ಹಳೇಪೇಟೆ ನಿವಾಸಿ ವಿನುತಾ(21) ನಿಗೂಢ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯ ಸಾವು ಇಲಿ ಪಾಶಾನ ಸೇವನೆಯಿಂದ ಆಗಿರುವುದು ಬೆಳಕಿಗೆ ಬಂದಿದೆ. ಮೋಹನ ನೇಕಾರ ಎಂಬವರ ಪುತ್ರಿಯಾಗಿದ್ದ ವಿನುತಾಳಿಗೆ ಘಟನೆ ನಡೆದ ಮರುದಿನ ಉಜಿರೆ ನಿವಾಸಿ ಪ್ರತಾಪ್ ಎಂಬಾತನ ಜೊತೆ ಮದುವೆ ನಿಗದಿಯಾಗಿತ್ತು. ಆದರೆ ಈ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ.
ಪ್ರತಾಪ್ ಹಾಗೂ ವಿನುತಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ವಿನುತಾ ಸಾವಿಗೀಡಾಗುವ ಎರಡು ದಿನಗಳ ಹಿಂದೆಯೂ ತಾನು ಕೆಲಸ ಮಾಡುವ ಸೂಪರ್ ಮಾರ್ಕೆಟ್ನಲ್ಲಿ ವಾಂತಿ ಮಾಡಿಕೊಂಡಿದ್ದು, ಪ್ರತಾಪ್ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ. ಹುಷಾರಾಗಿ ಮನೆಗೆ ಮರಳಿದ್ದ ವಿನುತಾ ಆರೋಗ್ಯ ಮತ್ತೆ ಹದಗೆಟ್ಟಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ವಿನುತಾ ಸಾವಿನ ಹಿಂದೆ ಅನೇಕ ಊಹಾಪೋಹ ಕೇಳಿಬಂದಿದ್ದು, ನಿನ್ನೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ವಿಷ ಸೇವಿಸಿ ಸಾವನ್ನಪ್ಪಿರುವುದು ದೃಢಪಟ್ಟಿದೆ.