ಕಾಸರಗೋಡು, ಏ.28: ನೆಲ್ಲಿಕು೦ಜೆ ಬೀಚ್ ರಸ್ತೆಯ ಖಾಸಗಿ ಜಮೀನಿನಲ್ಲಿ ಕೆಲದಿನಗಳ ಹಿಂದೆ ನಡೆದಿದ್ದ ನೆಲ್ಲಿಕುಂಜೆಯ ದಯಾನಂದ(49) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಂಜಿತ್(18) ಎಂಬಾತ ಪೊಲೀಸ್ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಮೃತ ದಯಾನಂದ ಅವರ ಅಳಿಯನಾಗಿದ್ದು, ತನ್ನ ಮೇಲೆ ನಿರಂತರ ದೈಹಿಕ ಕಿರುಕುಳ ನೀಡುತ್ತಿದ್ದುದಕ್ಕೆ ಪ್ರತಿಯಾಗಿ ದುಷ್ಕೃತ್ಯ ಎಸಗಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಘಟನೆ ನಡೆದ ನಾಲ್ಕು ದಿನಗಳ ಹಿಂದೆ ದಯಾನಂದ ನಾಪತ್ತೆಯಾಗಿದ್ದರು. ಅವರ ದೇಹವು ತ್ಯಾಜ್ಯ ವಸ್ತುಗಳಿಂದ ಮುಚ್ಚಿದ ಸ್ಥಿತಿಯಲ್ಲಿ ಗುಂಡಿಯೊಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು.
ಎಪ್ರಿಲ್ 21 ರಾತ್ರಿ 11 ಗಂಟೆಯ ಸುಮಾರಿಗೆ ಮನೆಯಿಂದ ಹೊರಬಂದಿದ್ದ ದಯಾನಂದರನ್ನು ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿ ರಂಜಿತ್ ನೈಲಾನ್ ರೋಪ್ನಿಂದ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದ, ಬಳಿಕ ಮೃತದೇಹವನ್ನು ಎಸೆದು ಪರಾರಿಯಾಗಿದ್ದ.
ರಂಜಿತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ತಾನೊಬ್ಬನೇ ಸೇರಿ ಕೊಲೆಗೈದಿದ್ದಾಗಿ ಹೇಳಿಕೊಂಡಿದ್ದಾನೆ. ರಂಜಿತ್ನನ್ನು ಆಗಾಗ ಕೊಲೆಗೈಯವುದಾಗಿ ಹೇಳಿಕೊಳ್ಳುತ್ತಿದ್ದ ದಯಾನಂದರನ್ನು ಮುಗಿಸದಿದ್ದರೆ ತನಗೆ ಕೇಡು ತಪ್ಪಿದ್ದಲ್ಲ ಎಂದ ಬಗೆದು ಆರೋಪಿ ಕೃತ್ಯವೆಸಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ