ಕನ್ನಡ ವಾರ್ತೆಗಳು

ಮದುವೆಯಾಗಿದ್ದರೂ ಪ್ರೀತಿಯ ಆಕರ್ಷಣೆಗೆ ಬಿದ್ದ ಕೇರಳದ ಯುವಜೋಡಿ ಮಂಗಳೂರಿನಲ್ಲಿ ನೇಣಿಗೆ ಶರಣು

Pinterest LinkedIn Tumblr

youth_susaid_photo_4

ಮಂಗಳೂರು: ಶಕ್ತಿ ನಗರದ ಸಮೀಪದ ದತ್ತನಗರದಲ್ಲಿ ರವಿವಾರ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳ ಸಾವಿಗೆ ಎರಡೂ ಕುಟುಂಬದೊಳಗಿನ ಮನಸ್ತಾಪವೇ ಕಾರಣ ಎನ್ನಲಾಗಿದ್ದು, ಇಬ್ಬರೂ ಮೊದಲೇ ವಿವಾಹಿತರು ಎಂಬ ಮಾಹಿತಿ ಲಭಿಸಿದೆ.

ಶಕ್ತಿ ನಗರದ ಸಮೀಪದ ದತ್ತನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೇರಳ ಮೂಲದ ಯುವ ಜೋಡಿ ನೇಣು ಬಿಗಿದು ಆತ್ಮಹತೈ ಮಾಡಿಕೊಂಡಿದ್ದು, ಪ್ರಕರಣ ರವಿವಾರ ರಾತ್ರಿ ಬೆಳಕಿಗೆ ಬಂದಿತ್ತು.

ಆತ್ಮಹತ್ಯೆಗೆ ಶರಣಾದ ಮ್ಯಾಥ್ಯೂ ಥಾಮಸ್ (33) ಹಾಗೂ ಮಂಜುಳಾ (29) ಇಬ್ಬರೂ ವಿಭಿನ್ನ ಧರ್ಮದವರಾಗಿದ್ದು, ಇಬ್ಬರಿಗೂ ಈ ಮೊದಲೇ ಮದುವೆಯಾಗಿತ್ತು.ಮ್ಯಾಥ್ಯೂ ಥಾಮಸ್ ಕ್ರಿಶ್ಚಿಯನ್ ಹುಡುಗಿಯನ್ನು ಹಾಗೂ ಮಂಜು ಹಿಂದೂ ಹುಡುಗನನ್ನು ಮದುವೆಯಾಗಿ ಸಂಸಾರ ನಡೆಸಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ ಎನ್ನಲಾಗಿದೆ.

ಅಕ್ಕಪಕ್ಕದ ಮನೆಯವರಾಗಿದ್ದರಿಂದ ಮ್ಯಾಥ್ಯೂ ಥಾಮಸ್ ಮತ್ತು ಮಂಜು ಪರಸ್ಪರ ಆಕರ್ಷಿತರಾಗಿ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.ಇದೇ ಹಿನ್ನೆಲೆಯಲ್ಲಿ ಇಬ್ಬರೂ ಉರು ಬಿಟ್ಟು ಮಂಗಳೂರಿಗೆ ಬಂದು ಕಳೆದ ಒಂದುವರೆ ತಿಂಗಳಿನಿಂದ ದತ್ತನಗರದ ಮನೆಯೊಂದರಲ್ಲಿ ಬಾಡಿಗೆ ಪಡೆದು ಮನೆ ಮಾಲಕರಿಗೆ ಗಂಡ -ಹೆಂಡತಿ ಎಂದು ನಂಬಿಸಿ ವಾಸವಾಗಿದ್ದರು ಎನ್ನಲಾಗಿದೆ.ಅಕ್ಕಪಕ್ಕದ ಜನರೂ ಸಹ ಹಾಗೆಯೇ ಅಂದುಕೊಂಡಿದ್ದರು.

ಇವರ ಮನೆಯಲ್ಲಿ ಫ್ರಿಡ್ಜ್ ಇಲ್ಲದ ಕಾರಣ ಪ್ರತಿ ದಿನ ಹಾಲು ತಂದು ಪಕ್ಕದ ಮನೆಯ ರೆಫ್ರಿಜರೇಟರ್‌ನಲ್ಲಿಟ್ಟು ಸಂಜೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಅಂದು ಬಾರದಿದ್ದುದರಿಂದ ಪಕ್ಕದ ಮನೆಯವರೇ ಇವರ ಮನೆಗೆ ಬಂದಾಗ ಕೀಲಿಕೈ ಹೊರಗಡೆ ಬಿದ್ದಿತ್ತು. ಸಂಶಯಗೊಂಡು ಮನೆಯ ಮಾಲೀಕರಿಗೆ ವಿಷಯ ತಿಳಿಸಿದರು.

ಬಳಿಕ ಬಾಗಿಲು ಒಡೆದಾಗ ಒಂದೇ ಕೋಣೆಯಲ್ಲಿ ಬೇರೆ ಬೇರೆಯಾಗಿ ಇಬ್ಬರೂ ನೇಣುಹಾಕಿಕೊಂಡಿದ್ದು ಕಂಡುಬಂದಿದೆ. ಅದೇ ಕೋಣೆಯಲ್ಲಿ ಮಲಯಾಳಂನಲ್ಲಿ ಬರೆದ ಡೆತ್‌ನೋಟ್‌ ಸಿಕ್ಕಿದೆ. ನಾವು ತಪ್ಪು ಮಾಡಿದ್ದೇವೆ. ನಮ್ಮನ್ನು ಕ್ಷಮಿಸಿ ಎಂದು ಆ ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ. ಅಲ್ಲದೆ ಮಂಜುಳಾ ಹಿಂದೂ ಆಗಿರುವುದರಿಂದ ತನ್ನನ್ನು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಮಂಗಳೂರು ಗ್ರಾಮಂತರ ಠಾಣಾ ಪೊಲೀಸರು ಮೃತರ ಮನೆಗೆ ವಿಷಯ ತಿಳಿಸಿದ್ದು ಪ್ರತಿಷ್ಠಿತ ಕುಟುಂಬವಾಗಿದ್ದರಿಂದ ಇಲ್ಲಿಯೇ ಅಂತ್ಯಕ್ರಿಯೆ ಕಾರ್ಯ ಮುಗಿಸುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.

Click :ಮಂಗಳೂರು : ಯುವ ಜೋಡಿ ನೇಣು ಬಿಗಿದು ಅತ್ಮಹತ್ಯೆ

Write A Comment