ಮಂಗಳೂರು : ವಿದ್ಯುತ್ ಅವಘಡದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನೊಬ್ಬನ ಅಂಗಾಂಗಗಳನ್ನು ಆತನ ಕುಟುಂಬದವರು ದಾನ ಮಾಡಿದ್ದು, ಇಂದು ಮುಂಜಾನೆ ಮಂಗಳೂರಿನ ಏ.ಜೆ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ವಿಮಾನದಲ್ಲಿ ಕೊಂಡೊಯ್ಯಲಾಯಿತು.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ವರ್ಕಾಡಿಯ ನಿವಾಸಿ ಕೃಷ್ಣ ಮೂಲ್ಯ ಹಾಗು ಗೀತಾ ದಂಪತಿಗಳ ಪುತ್ರ ವಿನೀತ್ ರಾಜ್ (19) ಅವರು ಮಂಗಳವಾರ ರಾತ್ರಿ ಮಂಗಳೂರಿನ ವರ್ಕ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿ ಕಟ್ಟಡದಿಂದ ಕೆಳಕ್ಕೆ ಬಿದ್ದು ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.
ಈ ಹಿನ್ನೆಲೆಯಲ್ಲಿ ವಿನೀತ್ ಪೋಷಕರು ವಿನೀತ್ ಅವರ ಹೃದಯ, ಕಾರ್ನಿಯಾ, ಕಿಡ್ನಿ, ಲಿವರ್, ಕಣ್ಣುಗಳು ಸೇರಿದಂತೆ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದರು. ಬೆಂಗಳೂರಿನ ದಾನಿಗಳ ಸಮಿತಿ ತಜ್ಞರು ಬುಧವಾರ ರಾತ್ರಿ ಮಂಗಳೂರಿಗೆ ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿದರು.
ಬೆಂಗಳೂರಿನಿಂದ ಮಂಗಳೂರಿಗೆ ಬಂದ ವೈದ್ಯರ ತಂಡ ಇಂದು ಬೆಳಿಗ್ಗೆ ಮಂಗಳೂರಿನ ಏ.ಜೆ ಆಸ್ಪತ್ರೆಯಿಂದ ವಿನೀತ್ ರಾಜ್ ಅಂಗಾಂಗಗಳನ್ನು ವಿಮಾನ ಮೂಲಕ ಬೆಂಗಳೂರಿಗೆ ಕೊಂಡೊಯ್ಯದರು. ಈ ಸಂದರ್ಭದಲ್ಲಿ ಎ.ಜೆ ಆಸ್ಪತ್ರೆಯಿಂದ ಬಜ್ಪೆ ವಿಮಾನ ನಿಲ್ದಾಣದವರೆಗೆ ಝೀರೊ ಟ್ರಾಫಿಕ್ ವ್ಯವಸ್ಥೆ ಕೈಗೊಳ್ಳಲಾಯಿತು.