ಮಂಗಳೂರು,ಫೆ.09: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮ ಕುದ್ರೋಳಿ ದ.ಕ.ಜಿ.ಪಂ. ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮಕ್ಕಳು ಹಾಗೂ ಅತಿಥಿಗಳಿಂದ ಚೈಲ್ಡ್ಲೈನ್ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು,
ಮಕ್ಕಳ ಸಹಾಯವಾಣಿ, ಚೈಲ್ಡ್ಲೈನ್-1098 ಸಂಯೋಜನಾಧಿಕಾರಿಯಾದ ಸಂಪತ್ತ್ ಕಟ್ಟಿರವರು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ-1098ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು, ಚೈಲ್ಡ್ಲೈನ್ ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದ ಅವರು ಕಾರ್ಯಚಟುವಟಿಕೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಭೆಯನ್ನುದ್ಧೇಶಿಸಿ ಸ್ಥಳೀಯ ಕಾರ್ಪೋರೇಟರ್ ಅಬ್ದುಲ್ ಅಝೀಜ್ರವರು ಮಾತನಾಡಿ, ಚೈಲ್ದ್ಲೈನ್-1098ನಿಂದ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸ್ಥಳೀಯ ಮಕ್ಕಳ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕುದ್ರೋಳಿ ವಾರ್ಡ್ನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಗಾಂಜಾ, ಡ್ರಗ್ಸ್, ಮಾದಕ ವಸ್ತು ಮಾರಾಟ, ತಮ್ಮ ಪರಿಸರದಲ್ಲಿ ಕಂಡುಬಂದಾಗ ತಕ್ಷಣ ಜನಸಾಮಾನ್ಯರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವಂತೆ, ಮಾದಕ ವಸ್ತು ಪತ್ತೆ ದಳದ ಸಿ.ಐ.ಡಿ ಪೊಲೀಸ್ ಅಧಿಕಾರಿ ಸಿ. ಕಿರಣ್ರವರು ಹೇಳಿದರು.
ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ತಿಳಿಸುವಂತೆ, ಮಕ್ಕಳು ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ, ಬಂದರ್ ಪೊಲೀಸ್ ಠಾಣೆಯ ಎ.ಎಸ್.ಐ ರಾಜರಾಮ್ರವರು ಹೇಳಿದರು. ಶಿಶು ಅಭಿವೃದ್ಧಿ ಇಲಾಖೆಯ ಸುಧಾರವರು ಮಾತನಾಡುತ್ತಾ, ಮಹಿಳೆಯರು ಮಕ್ಕಳ ಪಾಲನೆ ಪೋಷಣೆ ಬಗ್ಗೆ ಎಚ್ಚರವಹಿಸಬೇಕೆಂದರು ಬಾಲ್ಯ ವಿವಾಹದಿಂದಾಗುವ ತೊಂದರೆ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಗಮನವನ್ನು ನೀಡುವಂತೆ ತಿಳಿಸಿದರು. ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಮಗುವನ್ನು ದತ್ತು ಸ್ವೀಕಾರ ಮಾಡುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕು. ಸಂಧ್ಯಾ ಕುಲಾಲ್ ರವರು ಹಾಗೂ ಯವರು ಮಾಹಿತಿಯನ್ನು ನೀಡಿದರು.
ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯ ರೋಗ ಹರಡದಂತೆ, ಮುಂಜಾಗ್ರತೆಯಾಗಿ, ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸುವಂತೆ, ಹಾಗೂ ಮಲೇರಿಯಾ ರೋಗ ಬಂದಾಗ ಚಿಕಿತ್ಸೆ ಪಡೆಯುದರ ಬಗ್ಗೆ ಹಾಗೂ ಮಹಿಳೆ ಮತ್ತು ಮಕ್ಕಳಿಗೆ ಸರಕಾರಿ ಆಸ್ಪತ್ರೆಯಲ್ಲಿರುವ ಸವಲತ್ತುಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಯಾದ ಶ್ರೀಮತಿ ಲಲಿತಾರವರು ಮಾಹಿತಿಯನ್ನು ನೀಡಿದರು.
ಚೈಲ್ಡ್ಲೈನ್ನ ಅಸುಂತಾ ಡಿ’ಸೋಜರವರು ಗುಂಪು ಚರ್ಚೆಯನ್ನು ಹಾಗೂ ಕ್ರೋಢಿಕೃತ ಅಂಶಗಳನ್ನು ಕು. ಪವಿತ್ರ ಜ್ಯೋತಿಗುಡ್ಡೆ ರವರು ಸಭೆಯ ಮುಂದೆ ಮಂಡಿಸಿದರು, ಮಕ್ಕಳ ಸಹಾಯವಾಣಿ 1098 ಗೆ ಕರೆಯನ್ನು ಮಾಡುವುದರ ಮೂಲಕ ಮಕ್ಕಳ ಸಹಾಯವಾಣಿಯ ಆಶಾಲತಾ ಕುಂಪಲರವರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸೂಸಮ್ಮ ವರ್ಗೀಸ್, ಜೊಸಿ ಡಿ’ಸೋಜ, ಎಸ್.ಡಿ.ಎಂ.ಸಿಯ ಅಕ್ಬರ್ ಆಲಿರವರು ಹಾಗೂ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಅರೀಫ್ ಅಬ್ದುಲ್ ಜಬ್ಬಾರವರು ಉಪಸ್ಥಿತರಿದ್ದರು.
ಸ್ಥಳೀಯ ಶಾಲೆಯ ಶಿಕ್ಷಕರುಗಳು, ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರುಗಳು, ವಿಧ್ಯಾರ್ಥಿಗಳು, ಪೋಷಕರು, ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಸದಸ್ಯರುಗಳು, ಸಾರ್ವಜನಿಕರು ಭಾಗವಹಿಸಿದ್ದು, ಈ ಕಾರ್ಯಕ್ರಮವನ್ನು ರೇವತಿ ಹೊಸಬೆಟ್ಟುರವರು ನಿರೂಪಿಸಿದರು. ಕುದ್ರೋಳಿ ದ.ಕ.ಜಿ.ಪಂ. ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮುಹಮ್ಮದ್ ಹನೀಫ್ಯವರು ಸ್ವಾಗತಿಸಿ, ಜಯಂತಿ ಕೋಕಳರವರು ವಂದಿಸಿದರು.



