ಮಂಗಳೂರು,ಜ.11 : ನಗರದಲ್ಲಿ ಈಗಾಗಲೇ ಅನೇಕ ಪ್ರದೇಶದಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದೆ. ಆದರೆ ವಿವಿಧ ಗ್ರಾಮ ಪಂಚಾಯತ್ ಗಳಿಂದ ಅಕ್ರಮವಾಗಿ ನೀರಿನ ಸಂಪರ್ಕ ನಡೆಸಲಾಗುತ್ತಿದೆ . ಈ ಬಗ್ಗೆ ಮ.ನ.ಪಾ. ಏಕೆ ಕ್ರಮಕೈಗೊಂಡಿಲ್ಲ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆಯವರು ಮ.ನ.ಪಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಗರಾಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಬಗ್ಗೆ ವಿ.ಪ. ಸದಸ್ಯ ಐವನ್ ಡಿಸೋಜಾ ಮಾತನಾಡಿ, ಅಕ್ರಮವಾಗಿ ನೀರಿನ ಕನೆಕ್ಷನ್ ಹಾಕಿದವರ ಮೇಲೆ ಕೇಸು ದಾಖಲಿಸಲಾಗಿದೆಯೇ. ಇಲ್ಲವಾದಲ್ಲಿ ಕೇಸ್ ಹಾಕುವಂತೆ ಸೂಚಿಸಿದರು. ನೀರು ಸರಬರಾಜಾಗುವ ಪೈಪಿನ ಮೇಲೆ ಮಣ್ಣು ಹಾಕಲಾಗುತ್ತಿದ್ದು, ಪೈಪ್ ಹೊಡೆದು ಹೋದ ವೇಳೆ ಬಹಳ ಕಷ್ಟ ಅನುಭವಿಸ ಬೇಕಾಗಿದೆ. ಹೀಗಾಗಿ ಈಗಲೇ ಮಣ್ಣು ಹಾಕುವವರ ಮೇಲೆ ಕ್ರಮ ಜರಗಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದರು.
ಈ ಬಗ್ಗೆ ಯಾರಿಗೆ ನೋಟೀಸ್ ನೀಡುವ ಅವಶ್ಯಕತೆಯಿಲ್ಲ ನೇರವಾಗಿ ಕ್ರಮಕೈಗೊಳ್ಳಿ ಎಂದು ಶಾಸಕ ಜೆ.ಆರ್.ಲೋಬೊ ಮ.ನ.ಪಾ ಅಧಿಕಾರಿಗಳಿಗೆ ತಿಳಿಸಿದರು
ಉಳ್ಳಾಲ, ತುಂಬೆ ಡ್ಯಾಂ, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ನಗರಾಭಿವೃದ್ಧಿ ಇಲಾಖೆಯ ಅನೀಲ್ ಕುಮಾರ್, ಕರ್ನಾಟಕ ಮುನ್ಸಿಪಲ್ ನಿರ್ದೇಶಕಿ ಮಂಜುಳಾ, ಮಣಿಯನ್ನನ್, ತಿಲಕ್ ಗೌಡ ಮೊದಲಾದವರು ಉಪಸ್ಥಿತರಿದ್ದರು.