ಮಂಗಳೂರು,ಜ.07: ಮರವೂರಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ಧಾರ್ಥ ನಗರದಲ್ಲಿ ಭಾರತೀಯ ನೌಕಾಪಡೆಯವರ ವಸತಿ ನಿಲಯಕ್ಕಾಗಿ 2012 ರಲ್ಲಿ ಸರಕಾರ ಅಧಿಸೂಚನೆ ಹೊರಡಿಸಲಾಗಿರುವ ಭೂಸ್ವಾಧೀನ ಪ್ರಶ್ನೆಯಲ್ಲಿ ಸಂತ್ರಸ್ತರಿಗೆ ಅನ್ಯಾಯ ಎಸಗಿದೆ, ಲಕ್ಷ ಬೆಲೆಬಾಳುವ ಭೂಮಿಗೆ ಕೇವಲ 4 ಸಾವಿರದಷ್ಟು ರೂಪಾಯಿ ಪರಿಹಾರ ನೀಡಿ ಅವರ ಕುಟುಂಬವನ್ನು ಬೀದಿಪಾಲನ್ನಾಗಿಸುವುದು ಖಂಡನೀಯ ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿಯು ಆಪಾದಿಸಿದೆ.
ಬಜಪೆ ವಿಮಾನ ನಿಲ್ದಾಣದ ಬಳಿ ಇರುವ ಬೆಲೆ ಬಾಳುವ ಭೂಮಿಯನ್ನು ಅವೈಜ್ಞಾನಿಕವಾಗಿ ಸರಕಾರ ಭೂಸ್ವಾಧೀನಗೊಳಿಸುವ ಪ್ರಕ್ರಿಯೆಯಿಂದ ಅಲ್ಲಿ ವಾಸಿಸುತ್ತಿರುವಂತಹ ನಿವಾಸಿಗಳು ಅನ್ಯಾಯಕ್ಕೊಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಭೂಸ್ವಾಧೀನ ನಡೆಸಿದ ಜಾಗದಲ್ಲಿ ಒಟ್ಟು 25 ರಷ್ಟು ಕುಟುಂಬಗಳು ವಾಸಿಸುತ್ತಿದ್ದು ಅವುಗಳಲ್ಲಿ ಮರಿಯಾ ಎಂಬವರ ಕುಟುಂಬವನ್ನು ಹೊರಹಾಕಿದೆ. ಮತ್ತು ಅವರ ಮನೆಯನ್ನು ನಿನ್ನೆ ಜೆಸಿಬಿ ಮೂಲಕ ನೆಲಸಮಗೊಳಿಸಿ ಬೀದಿಗೆ ತಳ್ಳಲಾಗಿದೆ.
ಇಂದು ಸಂತ್ರಸ್ತರ ಪ್ರದೇಶಕ್ಕೆ ಭೇಟಿ ನೀಡಿದ ಡಿವೈಎಫ್ಐನ ಜಿಲ್ಲಾ ಉಪಾಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರಿಗಾಗಿರುವ ಅನ್ಯಾಯದ ಬಗ್ಗೆ ಸಂತ್ರಸ್ತರ ಜೊತೆ ಮಾತುಕತೆ ನಡೆಸಲಾಯಿತು, ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಜಿಲ್ಲಾಡಳಿತವು ಕೂಡಲೇ ಮಧ್ಯಪ್ರವೇಶಿಸಿ ಈ ಅನ್ಯಾಯಕ್ಕೊಳಗಾಗಿರುವ ಕುಟುಂಬಗಳ ನ್ಯಾಯಯುತ ಬೇಡಿಕೆಗಳನ್ನು ಬಗೆಹರಿಸಿ ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಮುತುವರ್ಜಿ ವಹಿಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ. ಎಂದು ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.