ಕುಂದಾಪುರ: ಕುಂದಾಪುರ ತಾಲೂಕಿನ ಕೊರ್ಗಿಯ ಹೊಸ್ಮಟದಲ್ಲಿ ಸಂಬಂಧಿಯೇ ತಡರಾತ್ರಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಹೋಗಿದ್ದ ಕೃತ್ಯ ನಡೆದಿದ್ದು ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಸ್ಥಳೀಯರಿಂದ ಹಾಗೂ ಚಂದ್ರಮತಿ ಅವರ ಪುತ್ರನ ಬಳಿ ಘಟನೆಯ ವಿವರವನ್ನು ಪಡೆದರು. ಈ ಸಂದರ್ಭ ಕುಂದಾಪುರ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ, ಎಸ್ಐ ದೇವರಾಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಥಳ ಮಹಜರು ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ನಡೆದಿದೆ.
ಘಟನೆ ಹಿನ್ನೆಲೆ: ಹೊಸ್ಮಠ ಮೆಕ್ಕೆಮನೆ ನಿವಾಸಿ ರಂಜಿತ್ ಶೆಟ್ಟಿ ಸೋಮವಾರ ತಡರಾತ್ರಿ ಚಿನ್ನ ಕೇಳುವ ನೆಪದಲ್ಲಿ ಸಂಬಂಧಿಗಳ ಮನೆಗೆ ನುಗ್ಗಿ ತನ್ನ ಅಜ್ಜಿ ಕೊರಗಮ್ಮ ಶೆಟ್ಟಿ (86), ದೊಡ್ಡಮ್ಮನ ಮಗಳು (ಅಕ್ಕ) ಚಂದ್ರಮತಿ ಶೆಟ್ಟಿ (38), ದೊಡ್ಡಪ್ಪ ಕುಷ್ಟಪ್ಪ ಅಲಿಯಾಸ್ ಕೃಷ್ಣಯ್ಯ ಶೆಟ್ಟಿ(65) ಎನ್ನುವವರಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡ ಮೂವರು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ವಿಚಾರಣೆ
ಕದ್ದ ಚಿನ್ನಾಭರಣವನ್ನು ಬ್ಯಾಗಿನಲ್ಲಿ ತುಂಬಿಸಿಕೊಂಡು ಸ್ನಾನ ಮುಗಿಸಿ ಮನೆಯಿಂದ ಹೊರಗೆ ತೆರಳಿದ್ದ ಆತ ಉಡುಪಿ ಮೊದಲಾದೆಡೆ ಸುತ್ತಾಡಿಕೊಂಡು ಚಿನ್ನವನ್ನು ಮಾರಾಟ ಮಾಡುವ ಸಲುವಾಗಿ ಕೋಟೇಶ್ವರಕ್ಕೆ ಬಂದಿದ್ದ ವೇಳೆ ಸ್ಥಳೀಯರು ನೀಡಿದ ಮಾಹಿತಿಯಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಮನೆಯವರ ಬಗ್ಗೆಯೂ ಆರೋಪಿ ತೀವ್ರ ಅಸಮಾಧಾನವನ್ನು ಹೊರಹಾಕಿದ್ದ ಎಂಬ ಮಾಹಿತಿ ಲಭಿಸಿದೆ. ಕೃತ್ಯಕ್ಕೆ ಬಳಸಿದ ಕತ್ತಿಯನ್ನು ಹಾಗೂ ಏಳು ಲಕ್ಷ ಅಂದಾಜು ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿರಿ:
ಕುಂದಾಪುರ: ಸಂಬಂಧಿಗಳ ರಕ್ತ ಹರಿಸಿದ ಕಿರಾತಕ-ಹಲ್ಲೆ ನಡೆಸಿ ದರೋಡೆ ಮಾಡಿದ ವಂಚಕ