ಮಂಗಳೂರು, ಡಿ.04: ಬಂದರು ನಗರಿ ಮಂಗಳೂರಿನಿಂದ ಇರಾನ್ಗೆ ಕಬ್ಬಿಣದ ಅದಿರು ರಫ್ತು ಮಾಡುವ ಮೂಲಕ ಶನಿವಾರ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಹೊಸ ಇತಿಹಾಸ ಸೃಷ್ಟಿಸಿದೆ.
66,500 ಮೆಟ್ರಿಕ್ ಟನ್ ರಫ್ತು ವ್ಯವಹಾರದಲ್ಲಿ ಇರಾನ್ಗೆ ಮೊದಲ ಬಾರಿಗೆ ಅದಿರು ಉಂಡೆಗಳನ್ನು ಸಾಗಿಸುತ್ತಿರುವ ಎಂವಿ ಆರಿಸ್ ಹಡಗಿಗೆ ಕೆಐಒಸಿಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮಲಯ್ ಚಟರ್ಜಿ ಅವರು ಶನಿವಾರ ನವಮಂಗಳೂರು ಬಂದರಿನಲ್ಲಿ ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಚಟರ್ಜಿ, ಮೇಕ್ ಇಂಡಿಯಾ ಪರಿಕಲ್ಪನೆಯಡಿ ಇರಾನ್ ದೇಶಕ್ಕೆ ಕೆಐಒಸಿಎಲ್ನಿಂದ ಪ್ರಥಮವಾಗಿ ಕಬ್ಬಿಣದ ಅದಿರು ಉಂಡೆ ರಫ್ತು ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಕೆಐಒಸಿಎಲ್ ಪ್ರಸ್ತುತ ಛತ್ತೀಸ್ಗಡದ ಕೆರಂದೂರು ಹಾಗೂ ಬಚೇರಿಯಿಂದ ಕಬ್ಬಿಣದ ಅದಿರು ಪಡೆಯುತ್ತಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿ ಅದಿರು ನಿಕ್ಷೇಪ ಹೊಂದಿದೆ. ಆದರೆ, ಕಂಪೆನಿಗೆ ಅವಶ್ಯವಿರುವಷ್ಟು ಅದಿರು ಪಡೆಯುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಅದಿರು ನಿಕ್ಷೇಪ ಹೊಂದುವುದು ಅವಶ್ಯವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದರು.
5 ಲಕ್ಷ ಮೆ. ಟನ್ ರಫ್ತು ಗುರಿ
ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಆದಿರನ್ನು ಬ್ರೆಜಿಲ್ ದೇಶದಿಂದ ಆಮದು ಮಾಡಿಕೊಂಡು ಅದನ್ನು ಕೆಐಒಸಿಎಲ್ನಲ್ಲಿ ಉಂಡೆಗಳಾಗಿ ಪರಿವರ್ತಿಸಿ ಇರಾನ್ಗೆ ರಫ್ತು ಮಾಡಲಾಗುತ್ತಿದೆ. 2016ರಲ್ಲಿ ಇರಾನ್ಗೆ ಒಟ್ಟು 5 ಲಕ್ಷ ಮೆ. ಟನ್ ಅದಿರು ಉಂಡೆಯನ್ನು ರಫ್ತುಮಾಡುವ ಗುರಿ ಹೊಂದಲಾಗಿದೆ ಎಂದು ಮಲಯ್ ಚಟರ್ಜಿ ವಿವರಿಸಿದರು.
ಈ ಸಂದರ್ಭ ಎನ್ಎಂಪಿಟಿ ಅಧ್ಯಕ್ಷ ಪಿ.ಸಿ. ಪರೀದ್, ಕೆಐಒಸಿಎಲ್ ನಿರ್ದೇಶಕ ಸುಬ್ಬರಾವ್, ರಫ್ತು ಏಜೆನ್ಸಿ ಸಂಸ್ಥೆ ಟಫ್ ಮೆಟಲರ್ಜಿ ಪ್ರೈ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಮಲ್ಲೊತ್ರಾ, ಆಡಳಿತ ನಿರ್ದೇಶಕ ಬಿ.ಪಿ. ಚಟರ್ಜಿ, ಗಣೇಶ್ ಶಿಪ್ಪಿಂಗ್ ಸಂಸ್ಥೆ ಮುಖ್ಯಸ್ಥ ಹಾಗೂ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಉಪಸ್ಥಿತರಿದ್ದರು.