ಮೂಡುಬಿದಿರೆ, ಡಿ.31 : ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಅಶ್ವತ್ಥಪುರ ಶ್ರೀ ಸೀತಾರಾಮ ದೇವಸ್ಥಾನದ ಬಳಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಸ್ಥಳೀಯ ಅನಿಲ್ ಶೆಟ್ಟಿ ಎಂಬವರ ಪುತ್ರ, ವಾಣಿವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೆ ತರಗತಿ ವಿದ್ಯಾರ್ಥಿ ಆದರ್ಶ ಶೆಟ್ಟಿ(12) ಎಂದು ಗುರುತಿಸಲಾಗಿದೆ.
ಬಾವಿಗೆ ಬೆಕ್ಕು ಬಿದ್ದಿದೆ ಎಂದು ಚಿಂತಿತನಾದ ಬಾಲಕ ಬೆಳಗ್ಗೆ 7 ಗಂಟೆ ಸುಮಾರಿಗೆ ಬಾವಿಗೆ ಇಳಿಯಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಈ ಯತ್ನದಲ್ಲಿ ಆತ ಆಯತಪ್ಪಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಈ ನಡುವೆ ಬಾಲಕ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ, ಸ್ಥಳೀಯರೊಡನೆ ಸೇರಿ ಹುಡುಕಲು ಪ್ರಾರಂಭಿಸಿದಾಗ ಮನೆಯ ಬಾವಿ ಸಮೀಪ ಬಾಲಕನ ಚಪ್ಪಲಿಗಳು ಕಂಡಿವೆ. ಬಾವಿಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರ್ಶ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಶಾಲೆಯಲ್ಲಿ ಬುಧವಾರ ಬೆಳಗ್ಗಿನಿಂದ ವಾರ್ಷಿಕೋತ್ಸವ ತಯಾರಿ ನಡೆದಿತ್ತು. ವಿದ್ಯಾರ್ಥಿಯ ಮರಣದ ಸುದ್ದಿ ತಿಳಿಯು ತ್ತಲೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರ್ಶನ ತಂದೆ ಅನಿಲ್ ಶೆಟ್ಟಿ ಕಲ್ಲ ಮುಂಡ್ಕೂರಿನಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ವಿಮಲಾ ಅಶ್ವತ್ಥಪುರದ ಅಂಗನವಾಡಿ ಕೇಂದ್ರದ ಸಿಬ್ಬಂದಿಯಾಗಿದ್ದಾರೆ. ಈ ದಂಪತಿಯ ಹಿರಿಯ ಮಗ ಮೂಡುಬಿದಿರೆ ಸಮೀಪದ ಮಾರಿಗುಡಿ ಬಳಿ 3 ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಆದರ್ಶನ ಅಗಲಿಕೆಯಿಂದ ಈ ಕುಟುಂಬ ತಮ್ಮ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೀಡಾಗಿದೆ.