
ಮಂಗಳೂರು, ಡಿ.30 : ಮಂಗಳೂರು ಮಹಾನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಸಂಚಾರ ಒತ್ತಡ ಅವಧಿಯಲ್ಲಿ ನಿರ್ದಿಷ್ಟ ಸಮಯದವರೆಗೆ ಘನ ವಾಹನಗಳ ಪ್ರವೇಶ ತಡೆಹಿಡಿಯುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 66 ಹಾಗೂ 75ರಲ್ಲಿ ಪ್ರಾಯೋಗಿಕವಾಗಿ ಬೆಳಗ್ಗೆ ಹಾಗೂ ಸಂಜೆ ಅರ್ಧ ತಾಸಿನವರೆಗೆ ನಗರದ ಹೊರಭಾಗದಲ್ಲಿ ಘನ ವಾಹನಗಳನ್ನು ನಿಲ್ಲಿಸಲಾಗುವುದು. ಡಿ.31ರಿಂದ ಈ ಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.
ರಾ.ಹೆ.66ರಲ್ಲಿ ಸುರತ್ಕಲ್ ಹಾಗೂ ಕೋಟೆಕಾರು ಬಳಿ ಹಾಗೂ ರಾ.ಹೆ.75ರಲ್ಲಿ ಕಣ್ಣೂರೂ ಸಮೀಪ ಸ್ಥಳವನ್ನು ಗುರುತಿಸಿ ಘನ ವಾಹನಗಳನ್ನು ನಿಲ್ಲಿಸಲಾಗುವುದು. ಬೆಳಗ್ಗೆ ಹಾಗೂ ಸಂಜೆ ಸಂಚಾರ ದಟ್ಟಣೆ ಅಧಿಕವಾಗಿರುವ ಸಮಯವನ್ನು ಪರಿಗಣಿಸಿ ಪೊಲೀಸ್ ಸಿಬ್ಬಂದಿ ಅರ್ಧ ತಾಸಿನವರೆಗೆ ಘನ ವಾಹನಗಳನ್ನು ತಡೆಹಿಡಿಯಲಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಈ ವ್ಯವಸ್ಥೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಕೈಗೊಳ್ಳಲಾಗುತ್ತದೆ. ಇದರ ಪರಿಣಾಮಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.