ಮಂಗಳೂರು: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪದವಿ ಮಹಾ ವಿದ್ಯಾಲಯದ ನೂತನ ಕಟ್ಟಡವನ್ನು ಮಂಗಳವಾರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಿದರು.
ಬಳಿಕ ಹೊನಲು ಬೆಳಕಿನ ಕ್ರೀಡೋತ್ಸವ ಅಂಗವಾಗಿ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ತರಗತಿಗಳ 3132 ವಿದ್ಯಾರ್ಥಿಗಳ ಸಾಮೂಹಿಕ ಕವಾಯತು ಪ್ರದರ್ಶನ ಕಣ್ಮನ ಸೆಳೆಯಿತು. ಕವಾಯತು ವೀಕ್ಷಿಸಿದ ನಿತಿನ್ ಗಡ್ಕರಿ, ತನ್ನ ಜೀವನದಲ್ಲೇ ಮಕ್ಕಳ ಇಂಥದ್ದೊಂದು ಅದ್ಭುತ ಪ್ರದರ್ಶನ ಕಂಡೇ ಇಲ್ಲ. ಇಲ್ಲಿ ಶಿಕ್ಷಕರ ಪರಿಶ್ರಮ ಎದ್ದು ಕಾಣುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಶಿಕ್ಷಣವೆಂದರೆ ಶಾಲಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೆಂದಲ್ಲ. ಜೀವನದ ಪರೀಕ್ಷೆಯಲ್ಲೂ ಯಶಸ್ವಿಯಾಗುವ ಸಂಸ್ಕಾರಯುತ ಶಿಕ್ಷಣ ಪಡೆಯಬೇಕು ಎಂದರು.
ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ವಿದ್ಯೆ ಕಲಿಸುವಾಗ ಸುಂದರವಾದ ಕಲಾಕೃತಿಗೆ ಜೀವತುಂಬುವ ಭಾವ ಗುರು ಹಾಗೂ ಹೆತ್ತವರಲ್ಲಿರಬೇಕೆಂದರು. ಐಟಿ, ಬಿಟಿ ತಂತ್ರಜ್ಞಾನದ ಜೊತೆಗೆ ಗತ ಇತಿಹಾಸದ ಪ್ರೇರಣೆಯೊಂದಿಗೆ ಭಾರತವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿಸುವ ಹೊಣೆ ಪ್ರತಿಯೊಬ್ಬರದ್ದಾಗಬೇಕು ಎಂದು ಗಡ್ಕರಿ ಕರೆ ನೀಡಿದರು.
ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಬಳ್ಳಾರಿ ಸಂಸದ ಶ್ರೀರಾಮುಲು, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ನಾಗರಾಜ ಶೆಟ್ಟಿ, ಉದ್ಯಮಿಗಳಾದ ಬಿಜೂ ರಮೇಶ್, ಸುಹಾಸ್ ಗೋಪಿನಾಥ್ ಬೆಂಗಳೂರು, ಮಲಯ ಚಟರ್ಜಿ ಮಂಗಳೂರು, ಶಿವಕುಮಾರ್ ಬೆಂಗಳೂರು, ಸುಧೀರ್ ಹೆಗ್ಡೆ ಕಾರ್ಕಳ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.