ಮಂಗಳೂರು,ನ.26 : ನ್ಯಾಯವಾದಿ ನೌಶಾದ್ ಖಾಶಿಂಜಿ ಹತ್ಯೆ ಪ್ರಕರಣ ಆರೋಪಿಗಳನ್ನು ಗುರುವಾರ ಮಂಗಳೂರಿನ ಸೆಷನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಪ್ರಕಟಿಸಬೇಕಿದ್ದ ತೀರ್ಪನ್ನು ಶುಕ್ರವಾರಕ್ಕೆ ಮುಂದೂಡಿದೆ.
ಆರೋಪಿಗಳಾದ ಬೆಳ್ತಂಗಡಿಯ ದಿನೇಶ್ ಶೆಟ್ಟಿ, ಪ್ರತಾಪ್ ಕೋಡಿಕಲ್, ರಿತೇಶ್ ಎಲ್. ಅಲಿಯಾಸ್ ರೀತು, ಸುಬ್ರಹ್ಮಣ್ಯ ಕದ್ರಿ ಹಾಗೂ ಗಣೇಶ್ ಕೋಡಿಕಲ್ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಗುರುವಾರದಂದು ನ್ಯಾಯಾಲಯ ಕಲಾಪದಲ್ಲಿ ನೌಶಾದ್ ಪರ ವಕೀಲರಾದ ನಾರಾಯಣ ಶೇರಿಗಾರ ಇದೊಂದು ಅಪರೂಪದ ಪ್ರಕರಣ, 2009ರ ಎಪ್ರಿಲ್ 9ರಂದು ನ್ಯಾಯವಾದಿ ನೌಶಾದ್ ರನ್ನು ಹತ್ಯೆ ನಡೆಸಿರುವುದು ಇದು ನ್ಯಾಯಾಂಗದ ಮೇಲಿನ ದಾಳಿಯಾಗಿದೆ. ಅದುದರಿಂದ ಈ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದರು.
ಅಪರಾಧಿಗಳಿಗೆ ಅಪರಾಧವನ್ನು ತಿದ್ದಿಕೊಳ್ಳಲು ಅವಕಾಶ ನೀಡುವಂತೆ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯವು ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದೆ