File Photo
ಪುತ್ತೂರು, ನ.19: ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಬಹುಭಾಷ ನಟ ವಿನೋದ್ ಆಳ್ವಾ ತನ್ನ ಚಾಲಕನ ಮೂಲಕ ಸಚ್ಚಿದಾನಂದರ ಕೊಲೆಗೆ ಬಳಸಿದ್ದನೆನ್ನಲಾದ ಜೀಪನ್ನು ಬುಧವಾರ ಪೊಲೀಸರು ಜಾಲ್ಸೂರು ಬಳಿಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.
ವಿನೋದ್ ಆಳ್ವಾ ಹಾಗೂ ಸಚ್ಚಿದಾನಂದರ ನಡುವೆ ವ್ಯಾವಹಾರಿಕ ಕಾರಣಗಳಿಂದಾಗಿ ವೈಮನಸ್ಸು ಮೂಡಿದ್ದು, ಇದರಿಂದ ಕೊಲೆ ಯತ್ನ ನಡೆಸಲಾಗಿದೆ ಎಂದು ದೂರು ದಾಖಲಾಗಿತ್ತು. ವಿನೋದ್ ಆಳ್ವಾನ ಚಾಲಕ ಉದಯ ಚೆಕ್ಕಿತ್ತಾಯ ತನ್ನ ಜೀಪನ್ನು ಸಚ್ಚಿದಾನಂದ ಸಂಚರಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಸಿದ್ದ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ವಿನೋದ್ ಆಳ್ವಾನ ಬಂಧನವಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದೀಗ ಕೊಲೆಗೆ ಬಳಸಲಾಗಿದೆ ಎಂದು ಹೇಳಲಾದ ಜೀಪನ್ನು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ರವಿ ನೇತೃತ್ವದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.