ಚೆನ್ನೈ, ನ.11: ಪಂಪಾನದಿಯನ್ನು ಮಲಿನಗೊಳಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇರಳ ಹೈಕೋರ್ಟ್ ಅಕ್ಟೋಬರ್ 16ರಂದು ನೀಡಿದ ಆದೇಶವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣವಾದ ದಂಡನೀಯ ಕ್ರಮವನ್ನು ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಯ ಪಂಪಾನದಿಯಲ್ಲಿ ಲಕ್ಷಾಂತರ ಅಯ್ಯಪ್ಪ ಭಕ್ತಾದಿಗಳು ಬಟ್ಟೆಗಳನ್ನು ಅಥವಾ ಸಾಮಗ್ರಿಗಳನ್ನು ವಿಸರ್ಜಿಸಬಾರದೆಂದು ಶಬರಿ ಮಲೆಯ ವಿಶೇಷ ಆಯುಕ್ತ ಕೆ. ಬಾಬು ಹೇಳಿದ್ದಾರೆ.
ಜಲ ಕಾಯ್ದೆ (ಮಾಲಿನ್ಯ ತಡೆ ಹಾಗೂ ನಿಯಂತ್ರಣ)ಯಡಿ ನದಿ ಅಥವಾ ಜಲಾಗಾರಗಳನ್ನು ಮಲಿನಗೊಳಿಸುವವರಿಗೆ ದಂಡ ಸಹಿತ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದೆಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿತ್ತು.
ಹೈಕೋರ್ಟ್ಆದೇಶದ ಬಗ್ಗೆ ಪಂಪಾನದಿ ಬಳಿ ನಿಯೋಜಿತರಾಗಿರುವ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ ಹಾಗೂ ಯಾತ್ರಿಕರು ಈ ಆದೇಶಕ್ಕೆ ಅನುಸಾರವಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಯಾತ್ರಾ ತಂಡಗಳ ನೇತೃತ್ವ ವಹಿಸಿದವರೂ ಕೂಡಾ ಇಂತಹ ಆಚರಣೆಗಳಲ್ಲಿ ತೊಡಗದಂತೆ ಸಹಯಾತ್ರಿಕರಿಗೆ ಮನವರಿಕೆ ಮಾಡಬೇಕೆಂದು ಆಯುಕ್ತರು ಕೇಳಿಕೊಂಡಿದ್ದಾರೆ.