ಮಂಗಳೂರು,ನ.05: ವಿಶ್ವ ಕೊಂಕಣಿ ಕೇಂದ್ರವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ಗೋವಾ ವಿಶ್ವ ವಿದ್ಯಾಲಯಗಳ ಸಹಯೋಗದೊಂದಿಗೆ ಎರಡು ದಿನಗಳ ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹವನ್ನು ಪ್ರಸಿದ್ಧ ಭಾಷಾತಜ್ಞ, ಭಾರತೀಯ ಭಾಷಾ ಸಂಸ್ಥಾನದ ಪೂರ್ವ ನಿರ್ದೇಶಕ, ಪ್ರಸಕ್ತ ಶಾಂತಿನಿಕೇತನದ ವಿಶ್ವ ಭಾರತಿಯಲ್ಲಿ ಸೆಂಟರ್ ಫ಼ಾರ್ ಎಂಡೆಂಜರ್ಡ್ ಲ್ಯಾಂಗ್ವೇಜಸ್ನ ಪೀಠದ ಮುಖ್ಯಸ್ಥರಾಗಿರುವ ಡಾ. ಉದಯ ನಾರಾಯಣ ಸಿಂಗ್ರವರು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಸನ್ಮಾನ್ಯ ಉಪಕುಲಪತಿಗಳಾಗಿರುವ ಡಾ. ಕೆ. ಭೈರಪ್ಪರವರು ವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಚಂದ್ರಹಾಸ ರೈರವರು ಮುಖ್ಯ ಅತಿಥಿಗಳಾಗಿದ್ದರು.
ಸಾಹಿತ್ಯಾಸಕ್ತರಿಗೆ ವಿಶೇಷ ಸಾಹಿತ್ಯಿಕ ಅನುಭೂತಿಯನ್ನು ಒದಗಿಸುವ ನಿಟ್ಟಿನಿಂದ ಆಯೋಜಿಸಲಾಗುತ್ತಿರುವ ಈ ಸಮಾರೋಹದಲ್ಲಿ ವಿಚಾರ ಗೊಷ್ಠಿ, ಮಾತುಕತೆ, ಸ್ಮಾರಕ ಭಾಷಣ, ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ಹಾಗೂ ಶಿಬಿರಾಗ್ನಿ ಕವಿಗೊಷ್ಠಿಗಳು ಜರುಗಿತು.
ಮಹಾರಾಷ್ಟ್ರ, ಗೋವಾ ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಂದ ಅನೇಕ ಸಾಹಿತಿಗಳು, ಸಂಶೋಧಕರು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಈ ಸಮಾರೋಹದಲ್ಲಿ ಭಾಗವಹಿಸಿದ್ದರು.
ದೇಶದಾದ್ಯಂತದಿಂದ ಸಂಶೋಧಕರು ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಈ ವಿಚಾರ ಸಂಕಿರಣವು ವಿಶೇಷವಾಗಿ ಅನುವಾದ ಸಾಹಿತ್ಯ ಮತ್ತು ಅನುವಾದ ಪ್ರಕ್ರಿಯೆಗಳ ಮೇಲೆ ಚರ್ಚಿಸಲಿದ್ದು, ಆ ಬಗ್ಗೆ ದಿಕ್ಸೂಚಿ ಭಾಷಣವನ್ನು ಗೋವಾ ವಿಶ್ವ ವಿದ್ಯಾಲಯದ ಬಾಕಿಬಾಬ್ ಬೋರ್ಕರ್ ಪೀಠದ ಅಧ್ಯಕ್ಷ ಶ್ರೀ ಉದಯ್ ಎಲ್. ಭೆಂಬ್ರೆಯವರು ನೀಡಿದರು.
ಭಾರತೀಯ ಸಾಹಿತ್ಯಕ್ಕೆ ಅನುವಾದದ ಕೊಡುಗೆ ಎಂಬ ವಿಷಯದ ಮೇಲೆ ಅನುವಾದ ಕ್ಷೇತ್ರದಲ್ಲಿ ನುರಿತ ಅನುಭವವಿರುವ ಸಾಹಿತಿಗಳಾದ ಶ್ರೀಮತಿ ವಿದ್ಯಾ ಪೈ, ಡಾ. ಗೀತಾ ಶೆಣೈ, ಡಾ. ಜೂಡಿ ಪಿಂಟೊ, ಶ್ರೀಮತಿ ಶೀಲಾ ಕೊಳಂಬ್ಕಾರ್, ಶ್ರೀಮತಿ ಜಯಮಾಲಾ ದಣಾಯತ್, ಶ್ರೀಮತಿ ತಾರಾ ಭಟ್, ಶ್ರೀ ಪಯ್ಯನೂರು ರಮೇಶ ಪೈ, ಶ್ರೀ ರಮೇಶ್ ಲಾಡ್, ಶ್ರೀ ಪುಂಡಲೀಕ್ ನಾಯಕ್ ಮುಂತಾದವರು ಭಾಗವಹಿಸಿದರು.
ಜೆ.ಎಮ್.ಲೋಬೋಪ್ರಭು ಮತ್ತು ಲೊಯೆಲ್ಲಾ ಲೋಬೋಪ್ರಭು ಸ್ಮಾರಕ ಭಾಷಣವನ್ನು ಕವಿತಾನುವಾದ – ಕ್ರಿಯಾಶೀಲತೆ ಮತ್ತು ವಸ್ತುನಿಷ್ಟತೆಯಲ್ಲಿ ಪಂಥಾಹ್ವಾನಗಳು ಎಂಬ ವಿಷಯದ ಮೇಲೆ ಖ್ಯಾತ ಲೇಖಕ, ಕವಿ ಶ್ರೀ ಜೆರ್ರಿ ಪಿಂಟೊರವರು ನೀಡಿದರು