ಮಂಗಳೂರು,ನ.1 :ಮಂಗಳೂರಿನ ನೆಹರೂ ಮೈದಾನದಲ್ಲಿ ಇಂದು ಬೆಳಿಗ್ಗೆ 60ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಬಳಿಕ ರಾಜ್ಯೋತ್ಸವ ಸಂದೇಶ ನೀಡಿದ ಅವರು, ಮನೆಯಂಗಳದಿಂದ ಆಡಳಿತದ ಅಂಗಳದವರೆಗೆ ಕನ್ನಡಭಾಷೆಯು ಪ್ರಭುತ್ವದ ಭಾಷೆಯಾಗಬೇಕು. ಇದಕ್ಕೆ ಎಲ್ಲರ ಇಚ್ಛಾಶಕ್ತಿ ಮತ್ತು ಬದ್ಧತೆಯ ಅಗತ್ಯವಿದೆ ಎಂದು ಹೇಳಿದರು.
ಮಾತೃಭಾಷೆಯ ಋಣ ತೀರಿಸಲು, ಕನ್ನಡ ನಾಡು- ನುಡಿಯ ರಕ್ಷಣೆಗಾಗಿ ಉದಾಸೀನ ಮನೋಭಾವ ತೊರೆದು ಆತ್ಮಸಾಕ್ಷಿಯೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಭೌತಿಕವಾಗಿ, ಭಾವನಾತ್ಮಕವಾಗಿ ಒಂದುಗೂಡಿಸಲು ಪ್ರಯತ್ನಿಸಿದ ಎಲ್ಲ ಕನ್ನಡಿಗರನ್ನು ಮತ್ತು ಸಾಹಿತಿಗಳನ್ನು ಸ್ಮರಿಸುವ ಅಗತ್ಯವಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ವಿಶೇಷ ಸ್ಥಾನವನ್ನು ಪಡೆದು ಕೊಂಡಿದೆ. ಅದರಲ್ಲೂ ಪ್ರವಾಸೋದ್ಯಮಕ್ಕೆ ತನ್ನದೆ ಆದ ಪ್ರಾಮುಖ್ಯತೆ ಇದೆ. ಕ್ಷೀರಭಾಗ್ಯ ಯೋಜನೆ ಯಡಿ 1,78,577 ಮಕ್ಕಳಿಗೆ ವಾರದಲ್ಲಿ 3 ದಿನ ಕೆನೆಭರಿತ ಹಾಲನ್ನು ನೀಡಲಾಗುತ್ತಿದೆ. ವಿದ್ಯಾಸಿರಿ ಯೋಜನೆಯಲ್ಲಿ 2014-15ನೆ ಸಾಲಿನಲ್ಲಿ 5,910 ವಿದ್ಯಾರ್ಥಿಗಳಿಗೆ 264 ಲಕ್ಷ ರೂ. ಅನುದಾನ ವನ್ನು ಬಿಡುಗಡೆ ಮಾಡಲಾಗಿದೆ. ಮೀನುಗಾರಿಕಾ ದೋಣಿಗಳಿಗೆ ಮಾರಾಟ ತೆರಿಗೆ ಮರುಪಾವತಿ ಎಂಬ ಯೋಜನೆಯಡಿ 8,350 ಕಿಲೋ ಲೀಟರ್ ಡೀಸೆಲ್ನ್ನು ಪೂರೈಕೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಘೋಷಣೆಯಾದ 21 ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ 20 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಶಸ್ತಿ ಪುರಸ್ಕೃತರು :
ಭತ್ತದ ಬೆಳೆಯಲ್ಲಿ ಸಾಧನೆ ಮಾಡಿದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಮೂಡುಬಿದಿರೆಯ ಎಸ್.ಡಿ.ಸಂಪತ್ ಸಾಮ್ರಾಜ್ಯ(ಕೃಷಿಕ್ಷೇತ್ರ), 1992ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉಪಮೇಯರ್ ಆಗಿದ್ದ ವೇಳೆ ನಗರದ ಕದ್ರಿ ಮಲ್ಲಿಕಟ್ಟೆ ಬಳಿ ಪ್ರೀತಿ-ನೀತಿ ಟ್ರಸ್ಟ್ ರಚಿಸಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ 84 ವರ್ಷದ ಹಿರಿಯ ನಾಗರಿಕ ಜುಡಿತ್ ಮೇರಿ ರೀಟಾ ಮಸ್ಕರೇನಸ್(ಸಮಾಜಸೇವೆ)ರಿಗೆ ಪ್ರಶಸ್ತಿ ನೀಡಲಾಗಿದೆ. ನಗರದ ವೈಟ್ ಡೌಸ್ ಸೇವಾ ಸಂಸ್ಥೆಯ ಅಧ್ಯಕ್ಷ ಕೋರಿನ್ ಆಂಟೋನಿಯಟ್ ರಸ್ಕಿನ್ಹಾ (ಸಮಾಜ ಸೇವೆ), ಮಂಗಳೂರಿನ ಶಾರದಾ ಬಾರ್ಕೂರ್(ರಂಗ ಭೂಮಿ) , ಪ್ರಜಾವಾಣಿಯ ಬ್ಯೂರೂ ಮುಖ್ಯಸ್ಥ ಬಾಲಕೃಷ್ಣ ಪುತ್ತಿಗೆ(ಪತ್ರಿಕೋದ್ಯಮ) , ಹಲವು ವರ್ಷಗಳಿಂದ ನಗರದ ಫುಟ್ಬಾಲ್ ಕ್ರೀಡೆ ಸೇರಿದಂತೆ ಇತರ ಕ್ರೀಡೆಗಳಲ್ಲಿ ಕ್ರೀಡಾ ಸಂಘಟಕರಾಗಿ ದುಡಿಯುತ್ತಿರುವ ಡಿ.ಎಂ.ಅಸ್ಲಂ(ಕ್ರೀಡೆ) ಸಾನಿಧ್ಯ ಸಂಸ್ಥೆ (ವಿಶೇಷ ಮಕ್ಕಳ ಸೇವಾ ಸಂಸ್ಥೆಯ)ಗೆ ಪ್ರಶಸ್ತಿ ನೀಡಲಾಯಿತು.
ಬಂಟ್ವಾಳ ತಾಲೂಕಿನ ನಾರ್ಶದ ಹಾಜಿ ಸುಲೈಮಾನ್( ಶಿಕ್ಷಣ),ಡಾ.ವಿಶ್ವನಾಥ ನಾಯಕ್.ಪಿ(ವೈದ್ಯಕೀಯ), ಕರಂಬಾರಿನ ದಿವಾಕರ ದಾಸ್(ಕಲೆ) ಪುತ್ತೂರು ತಾಲೂಕಿನ ಬಿರುಮಲೆ ಬೆಟ್ಟದ ಅಭಿವೃದ್ಧಿ ಸಮಿತಿಯ ಮುಖಂಡರಾದ ಸಿ.ಎಚ್.ಕೋಚಣ್ಣ ರೈ(ಸಮಾಜ ಸೇವೆ),ದೋಳ್ಪಾಡಿಯ ಶೀನ ಪರವ ಭೂತ ನರ್ತನದ ಪಾತ್ರಿ (ಜಾನಪದ ಕಲೆ)ಕಾಸರಗೋಡಿನ ಮಾನ್ಯತಿಮ್ಮಯ್ಯ (ಯಕ್ಷಗಾನ)ಸುಳ್ಯದ ಗೋಪಾಡ್ಕರ್ (ಕಲೆ),ಮೂಡುಬಿದಿರೆಯ ನಾರಾಯಣ ಪೂಜಾರಿ ಪಿ.ಎಂ (ಸಮಾಜ ಸೇವೆ) ಮಂಗಳೂರಿನ ಉರ್ಬಾನ್ ಪಿಂಟೋ (ಸಮಾಜ ಸೇವೆ),ಸಂತೋಷ್ ಐತಾಳ್( ಕಲೆ.ಸಂಸ್ಕೃತಿ),ಸುರತ್ಕಲ್ನ ಲೋಕೇಶ್ (ಪತ್ರಿಕೋದ್ಯಮ ) , ಕೇಶವ ವಿಟ್ಲ (ಛಾಯಾಗ್ರಾಹಕ), ಖಾಲಿದ್ ಉಜಿರೆ(ಶಿಕ್ಷಣ) ಹಾಗೂ ಪುರಂದರ ಪಿ.ಜೆ (ಕ್ರೀಡೆ) ಪ್ರಶಸ್ತಿ ಪಡೆದುಕೊಂಡ ಇತರ ಸಾಧಕರಾಗಿದ್ದಾರೆ.
ಧ್ವಜಾರೋಹಣಕ್ಕೆ ಮೊದಲು ನಗರದ ಜ್ಯೋತಿವೃತ್ತದಿಂದ ನೆಹರೂ ಮೈದಾನದ ತನಕ ಆಕರ್ಷಕ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. 16 ತಂಡ ಗಳು ಮತ್ತು 2 ಪೊಲೀಸ್ ವಾದ್ಯ ತಂಡಗಳ ಆಕರ್ಷಕ ಪಥಸಂಚಲನ ನಡೆಯಿತು.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯಾ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಮಂಗಳೂರು ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಅಪರ ಜಿಲ್ಲಾಧಿಕಾರಿ ಕುಮಾರ್, ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ದ.ಕ.ಜಿಲ್ಲಾ ಎಸ್ಪಿ ಡಾ. ಶರಣಪ್ಪ, ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್.ಮುರುಗನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಉಪ ಮೇಯರ್ ಪುರುಷೋತ್ತಮ್ ಚಿತ್ರಾಪುರ ಹಾಗೂ ವಿವಿಧ ಅಕಾಡೆಮಿಯ ಅಧ್ಯಕ್ಷರುಗಳು ಮತ್ತಿತ್ತರ ಅಧಿಕಾರಿಗಳು ಉಪಸ್ಥಿತರಿದ್ದರು.