ಮಂಗಳೂರು,ಆ.05 : ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ ಕಳೆದ 20 ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ ದ್ವಿತೀಯ ಹಂತಕ್ಕೆ ಕಾಲಿರಿಸಿದೆ. ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಚ ಮಂಗಳೂರು ಅಭಿಯಾನದ ದ್ವಿತೀಯ ಹಂತ 20 ವಾರಗಳ ಸ್ವಚ್ಛತಾ ಕಾರ್ಯಕ್ರಮಗಳಿಗೆಕರಂಗಲಪಾಡಿಯಲ್ಲಿ ಚಾಲನೆ ನೀಡಲಾಯಿತು.
ಕರಂಗಲಪಾಡಿ ಪರಿಸರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಶನ್ನಿನ ಟ್ರಸ್ಟಿಗಳಾದ ಪೂಜ್ಯ ಸ್ವಾಮಿ ಮುಕ್ತಿದಾನಂದಜಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಚ್ಕುಮಾರ ಪ್ರಥಮ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದಜಿ, ಶ್ರೀ ಎಂ ಆರ್ ವಾಸುದೇವ, ಶ್ರೀ ಮಂಜುನಾಥ ಭಂಡಾರಿ, ಶ್ರೀ ಪ್ರಕಾಶ್ ಸಾಲ್ಯಾನ್, ಶ್ರೀ ಪ್ರೇಮಾನಂದ ಶೆಟ್ಟಿ, ಡಾ. ಜೀವರಾಜ್ ಸೊರಕೆ, ಡಾ ಸತೀಶ್ರಾವ್, ಶ್ರೀಬಿಎಚ್ವಿ ಪ್ರಸಾದ ವಿಶೇಷ ಅಹ್ವಾನಿತರಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಳೆದ 20 ವಾರಗಳ ಯಶಸ್ವಿ ಅಭಿಯಾನದ ಸಚಿತ್ರ ವರದಿಯ ಫೊಟೊ ಆಲ್ಬಂ ಹಾಗೂ ವಿಡಿಯೋಗಳನ್ನು ಅಭಿಯಾನದ ಪೋಷಕರಾದ ಎಂಆರ್ಪಿಎಲ್ ಸಂಸ್ಥೆಗೆ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶಕಾರ್ಣಿಕ್ ಹಾಗೂ ಸಂಯೋಜಕ ದಿಲ್ರಾಜ್ ಆಳ್ವ ಹಸ್ತಾಂತರಿಸಿ ಧನ್ಯವಾದ ಸಮರ್ಪಿಸಿದರು.
ನೂತನ ಆಟೋ ನಿಲ್ದಾಣದ ನಿರ್ಮಾಣ ಹಾಗೂ ಉದ್ಘಾಟನೆ :
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ವತಿಯಿಂದ ಕರಂಗಲಪಾಡಿ ಆಟೋನಿಲ್ಲುವ ಸ್ಥಳವನ್ನು ಸ್ವಚ್ಛಗೊಳಿಸಿ ನೂತನವಾಗಿ ನಿರ್ಮಿಸಿ ಸುಂದರಗೊಳಿಸಲಾಗಿದೆ. ಮಂಗಳೂರನ್ನು ಶುಚಿಗೊಳಿಸುವ ಕಾರ್ಯದ ಜೊತೆ ಜೊತೆಗೆ ಸೌಂದರ್ಯೀಕರಣ ಹಮ್ಮಿಕೊಳ್ಳಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಗೂ ಸುಂದರವಾಗಿ ನಿರ್ಮಿಸಲಾದ ಈ ನಿಲ್ದಾಣದ ಸುತ್ತಮುತ್ತ ಸ್ವಚ್ಚತೆಯ ಕುರಿತು ಜಾಗೃತಿಯನ್ನುಂಟು ಮಾಡುವ ಬೋರ್ಡಗಳನ್ನು ಅಳವಡಿಸಲಾಗಿದೆ. ಈ ನಿಲ್ದಾಣವನ್ನು ಎಂಆರ್ಪಿಎಲ್ ಎಂ.ಡಿ ಶ್ರೀ ಎಚ್ ಕುಮಾರ್ ಇವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಕರಂಗಲಪಾಡಿ ಆಟೋಚಾಲಕರು ಸ್ವಾಮಿಜಿತಕಾಮಾನಂದಜಿ ಹಾಗೂ ಇನ್ನಿತರ ಸ್ವಾಮಿಜೀಗಳನ್ನು ಫಲ ಪುಷ್ಪ ನೀಡಿ ಗೌರವಿಸಿದರು.
ಅಶ್ವತ್ಥಕಟ್ಟೆಯ ನವೀಕರಣ-ಕರಂಗಲಪಾಡಿಯಲ್ಲಿರುವ ಅಶ್ವತ್ಥಮರದ ಸುತ್ತ ಮುತ್ತ ಇರುವ ಕಟ್ಟೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಕಟ್ಟೆಯ ಮಣ್ಣು ರಸ್ತೆಗೆ ಜಾರಿ ವಾಹನಗಳ ಸಂಚಾರಕ್ಕೂ ಅನಾನುಕೂಲವಾಗುತ್ತಿತ್ತು. ಇದನ್ನು ಗಮನಿಸಿದ ಸ್ವಚ್ಚ ಮಂಗಳೂರು ಅಭಿಯಾನದ ಕಾರ್ಯಕರ್ತರು ಕಳೆದ ನಾಲ್ಕೈದು ದಿನಗಳಿಂದ ಅದರ ರಿಪೇರಿ ಕಾರ್ಯದಲ್ಲಿ ತೊಡಗಿ ಇಂದು ಅದನ್ನು ಪೂರ್ತಿಗೊಳಿಸಿ ಶುಚಿಗೊಳಿಸಿ ಅಂದಗೊಳಿಸಿದ್ದಾರೆ. ದಾರಿಹೋಕರು ಸಾರ್ವಜನಿಕರು ಈ ಕಾರ್ಯವನ್ನು ಮನಸಾರೆ ಹೊಗಳುತ್ತಿದ್ದುದು ಸಾಮಾನ್ಯವಾಗಿತ್ತು.
400 ಸ್ವಯಂ ಸೇವಕರು :
ಸುಮಾರು 400 ಕ್ಕೂ ಅಧಿಕ ಸ್ವಯಂ ಸೇವಕರು ಅಭಿಯಾನದಲ್ಲಿ ಪಾಲ್ಗೊಂಡರು. ಒಟ್ಟುಎಂಟು ತಂಡಗಳನ್ನು ರಚಿಸಿ ಹಿರಿಯ ಸ್ವಯಂ ಸೇವಕರ ಮಾರ್ಗ ದರ್ಶನದಲ್ಲಿ ಪಿವಿಎಸ್ ವೃತ್ತದಿಂದ ಬಂಟ್ಸ ಹಾಸ್ಟೆಲ್ ಕರಂಗಲಪಾಡಿ ಪರಿಸರದಲ್ಲಿ ಅಭಿಯಾನ ನಡೆಸಲಾಯಿತು. ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ನಿಟ್ಟೆ ಶಿಕ್ಷಣ ಸಂಸ್ಥೆ, ರಥಬೀದಿ ಸರಕಾರಿ ಪದವಿ ಸಂಸ್ಥೆ, ಎಂಆರ್ಪಿಎಲ್ ನೌಕರರು, ಆಶ್ರಮದ ಭಕ್ತರು, ಆಶ್ರಮದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಚ್ಚತಾ ಕೈಂಕರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಸ್ವಚ್ಚ ಭಾರತ ಸೆಮಿನಾರ್ :ಅಭಿಯಾನದ ತರುವಾಯ ಬೆಳಿಗ್ಗೆ 10 ಯಿಂದ 2 ಗಂಟೆಯ ವರೆಗೆ ಆಶ್ರಮದಲ್ಲಿ ಸ್ವಚ್ಚ ಭಾರತದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾಮಿ ಮುಕ್ತಿಪದಾ ನಂದಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರಿ ಎಚ್ಕುಮಾರ್ ಮುಖ್ಯಅತಿಥಿಯಾಗಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸ್ವಾಮಿ ವೀರೇಶಾನಂದಜಿ, ಪ್ರೋ. ರಘೋತ್ತಮ್ರಾವ್ ಹಾಗು ಪ್ರೋ. ನಂದನ ಪ್ರಭು ಭಾಗವಹಿಸಿದ್ದರು.