ಮಂಗಳೂರು, ಸೆ.30 : ಎತ್ತಿನಹೊಳೆ ಯೋಜನೆ ಬಗ್ಗೆ ಮಂಗಳೂರು ಕೆಥೊಲಿಕ್ ಧರ್ಮಪ್ರಾಂತದ ನೇತೃತ್ವದಲ್ಲಿ ಬಿಷಪ್ ಹೌಸ್ನಲ್ಲಿ ಸಭೆ ನಡೆಯಿತು. ಮಂಗಳೂರು ಕೆಥೊಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಅಲೋಶಿಯಸ್ ಪೌಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ 7 ಪ್ರಮುಖ ನಿರ್ಣಯಗಳನ್ನು ಮಂಡಿಸಿದರು.
7 ಪ್ರಮುಖ ನಿರ್ಣಯ ಮಂಡನೆಗಳು:
1.ಬಾಯಾರಿದವರಿಗೆ ನೀರು ಕೊಡುವುದು ನಮ್ಮ ಧರ್ಮ.
2.ಕರ್ನಾಟಕ ಸರಕಾರವು ಬರಪೀಡಿತ ಜನರಿಗೆ ಕುಡಿಯುವ ನೀರಾವರಿ ಯೋಜನೆಯನ್ನು ಮಾಡುವಲ್ಲಿ ನಮ್ಮ ಅಭ್ಯಂತರವಿಲ್ಲ.
3.ಎತ್ತಿನಹೊಳೆ ಯೋಜನೆಯ ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಧೋರಣೆ ಕೈಬಿಡಲಿ.
4.ಬರಪೀಡಿತ ಜಿಲ್ಲೆಗಳಿಗೆ ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಅನುಸರಿಸಿದ ವಿಧಾನವನ್ನು ಉಪಯೋಗಿಸಿ ಪರ್ಯಾಯ ನೀರಿನ ವ್ಯವಸ್ಥೆ ಮಾಡ ಬೇಕು.
5.ಎತ್ತಿನಹೊಳೆ ಯೋಜನೆಯು ಪ್ರಜಾಪ್ರಭುತ್ವದ, ಕಾನೂನು ಚೌಕಟ್ಟಿನಲ್ಲಿ ಇರಬೇಕು. ಅವೈಜ್ಞಾನಿಕ, ಅನುಪಯುಕ್ತ ಎತ್ತಿನಹೊಳೆ ಯೋಜನೆಯನ್ನು ಈ ತಕ್ಷಣ ನಿಲ್ಲಿಸಬೇಕು.
6.ಎತ್ತಿನಹೊಳೆ ಯೋಜನೆ ಬಗ್ಗೆ ಸರಕಾರದವರು ಹಾಗೂ ಕರಾವಳಿಯ ಜನರೊಂದಿಗೆ ಮಾತುಕತೆಯನ್ನು ಮಂಗಳೂರಿನಲ್ಲಿಯೇ ನಡೆಸಬೇಕು. ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು.
7. ಕರ್ನಾಟಕ ಸರಕಾರದ ನೀರಾವರಿ ನಿಗಮ ಹಸಿರು ಪೀಠ ನ್ಯಾಯಾಲಯಕ್ಕೆ ಸಲ್ಲಿಸಲಾದ ನೀರಿನ ಹಕ್ಕಿನ ಅಫಿದವಿತ್ತನ್ನು ಕೂಡಲೇ ವಾಪಸ್ ಪಡೆಯಬೇಕು.ಅರಣ್ಯ ನಾಶ, ವನ್ಯಜೀವಿಗಳ ನಾಶ, ಪ್ರಕೃತಿಯನ್ನು ಧ್ವಂಸ ಮಾಡಿ ಸಾರ್ವಜನಿಕ ಹಣದ ದುರುಪಯೋಗ ಮಾಡುವ ಯೋಜನೆಯನ್ನು ಈ ಕೂಡಲೇ ನಿಲ್ಲಿಸಬೇಕು
ನೇತ್ರಾವತಿ ನದಿಯು ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಮಂಗಳೂರು ಧರ್ಮಪ್ರಾಂತ್ಯದಲ್ಲಿ ಹರಿದು ಹೋಗುತ್ತದೆ. ಈ ಪ್ರದೇಶ ದಲ್ಲಿರುವ ಎಲ್ಲಾ ಜಾತಿ, ಧರ್ಮದ ಜನತೆಗೆ ನೀರಿನ ಅಭಾವದ ಕಹಿ ಅನುಭವವಿದೆ. ಮುಂದೆ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಹೊರಟಲ್ಲಿ ನಾಡಿನ ಜನತೆಯೊಂದಿಗೆ ಹೋರಾಟಕ್ಕೆ ಇಳಿಯುವುದು ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಪ್ರೊ.ಎಸ್.ಜಿ. ಮಯ್ಯ ಎತ್ತಿನಹೊಳೆ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ವಿಕಾರ್ ಜನರಲ್ ವಂ. ಫಾ. ಡೆನ್ನಿಸ್ ಮೋರಸ್ ಪ್ರಭು, ಧರ್ಮಪ್ರಾಂತ ಪಾಲನ ಮಂಡಳಿ ಕಾರ್ಯದರ್ಶಿ ಎಂ ಪಿ ನೊರೊನ್ಹಾ, ಧರ್ಮಗುರು ಜೆ ಬಿ ಕ್ರಾಸ್ತ, ಧರ್ಮ ಪ್ರಾಂತ ಪಿಆರ್ಒ ಫಾ.ವಿಲಿಯಂ ಮೆನೆಜಸ್, ಮುಖಂಡ ರುಗಳಾದ ರಾಯ್ ಕ್ಯಾಸ್ಟಲಿನೊ, ಲ್ಯಾನ್ಸಿ ಡಿಕುನ್ನ, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗ್ಡೆ, ಮನಪಾ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ ಮುಂತಾದವರು ಉಪಸ್ಥಿತರಿದ್ದರು.