ಕುಂದಾಪುರ: ತನ್ನ ಮೊಮ್ಮಗಳ ವಯಸ್ಸಿನ ಅಪ್ರಾಪ್ತೆಯೋರ್ವಳ ಮೇಲೆ ಅದೇ ಊರಿನ 55 ವರ್ಷ ಪ್ರಾಯದ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದಲ್ಲದೇ ವಿಚಾರ ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಶಂಕರನಾರಾಯಣ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕಿನ ಕುಗ್ರಾಮವಾದ ಯಡೆಮೊಗೆಯ ಕಳಾಕಳಿ ಎಂಬಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹೇಶ್ ಶೆಟ್ಟಿ (55) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಶೆಟ್ಟಿ ಹಾಗೂ ನೊಂದ ಯುವತಿ (16 ವರ್ಷ) ಆಸುಪಾಸಿನವರೆನ್ನಲಾಗಿದ್ದು, ಆಕೆಯ ತಂದೆ ಕೆಲ ವರ್ಷದ ಹಿಂದೆ ಹ್ರದಯಾಘಾತದಲ್ಲಿ ನಿಧನರಾಗಿದ್ದರು. ಬಳಿಕ ಸೋದರ ಹಾಗೂ ಸೋದರಿ ಮತ್ತು ತಾಯಿಯೊಡನೆ ಆಕೆ ಅಲ್ಲಿ ವಾಸಿಸುತ್ತಿದ್ದು ಹತ್ತನೇ ತರಗತಿ ಓದುತ್ತಿದ್ದಳು ಎನ್ನಲಾಗಿದೆ. ಯುವತಿ ಹಾಗೂ ಮನೆಯವರ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಆಗಾಗ್ಗೆ ಈಕೆಯ ಮನೆಗೆ ಬರುತ್ತಿದ್ದ ಮಹೇಶ್ ಶೆಟ್ಟಿ ಕಳೆದ ಮೇ ತಿಂಗಳಲ್ಲಿ ಅದೊಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯ ಯುವತಿ ಒಂಟಿಯಾಗಿದ್ದ ಸಂದರ್ಭ ಆಕೆಯ ಮೇಲೆ ಬಲತ್ಕಾರ ನಡೆಸಿದ್ದಾನೆ, ಅಲ್ಲದೇ ವಿಚಾರ ಯಾರಿಗಾದರೂ ತಿಳಿಸಿದಲ್ಲಿ ಎಲ್ಲರನ್ನೂ ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾನೆನ್ನಲಾಗಿದೆ. ಇದರಿಂದ ಬೆದರಿದ ಯುವತಿ ವಿಚಾರವನ್ನು ಗೌಪ್ಯವಾಗಿರಿಸಿದ್ದು ಸದ್ಯ ಆಕೆ 4 ತಿಂಗಳ ಗರ್ಭಿಣಿಯಾಗಿದ್ದಾಳೆ. ದೇಹಸ್ಥಿತಿಯಲ್ಲಿ ಬದಲಾವಣೆಯಾದ ಕಾರಣ ಆಕೆಯ ತಾಯಿ ವಿಚಾರಿಸಿದಾಗ ನಡೆದ ಘಟನೆಯನ್ನು ಆಕೆ ತಾಯಿ ಬಳಿ ಹೇಳಿಕೊಂಡಿದ್ದು ಬಳಿಕ ಶಂಕರನಾರಾಯಣ ಠಾಣೆಯಲ್ಲಿ ಮಹೇಶ್ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದಾರೆ.
ಯುವತಿಯ ದೂರು ದಾಖಲಿಸಿಕೊಂಡ ಪೊಲೀಸರು ಕುಂದಾಪುರ ವೃತ್ತನಿರೀಕ್ಷಕ ದಿವಾಕರ ಪಿ.ಎಂ. ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಮೂಲತಃ ಹಾಸದವನು ಎನ್ನಲಾಗಿದ್ದು ಕೆಲಸವನ್ನರಸಿ ಹಲವು ವರ್ಷಗಳ ಹಿಂದೆಯೇ ಉಡುಪಿಗೆ ಬಂದಿದ್ದ. ಬಳಿಕ ಯಡಮೊಗೆ ಆಸುಪಾಸಿನಲ್ಲಿ ಕಲ್ಲು ಕ್ವಾರಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು ವಿವಾಹಿತನಾಗಿ ಇಬ್ಬರು ಮಕ್ಕಳಿದ್ದಾರೆ.
ಸದ್ಯ ಶಂಕರನಾರಾಯಣ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.