ಮಂಗಳೂರು, ಸೆ.15 : ನಗರದ ಸೆಂಟ್ರಲ್ ಮಾರ್ಕೆಟ್ ರಸ್ತೆಯಲ್ಲಿ ರಿಕ್ಷಾಚಾಲಕನೋರ್ವನನ್ನು ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮರಕಡ ದೇವಂತಗುಡ್ಡೆ ನಿವಾಸಿ ಪುನೀತ್ ಸಾಲ್ಯಾನ್ (24) ಬಂಧಿತ ಆರೋಪಿಯಾಗಿದ್ದಾನೆ.
ಮೊನ್ನೆ ಮಧ್ಯಾಹ್ನ ಸೆಂಟ್ರಲ್ ಮಾರ್ಕೆಟ್ ನ ರೂಪವಾಣಿ ಥಿಯೇಟರ್ ಬಳಿ ರಾಂಗ್ ಸೈಡ್ ನಿಂದ ಬೈಕ್ ನಲ್ಲಿ ಬರುತ್ತಿದ್ದ ಪುನೀತ್ ಸಾಲ್ಯಾನ್ ನನ್ನು ತಡೆದ ರಿಕ್ಷಾಚಾಲಕ, ಪಂಜಿಮೊಗರಿನ ಗೋಪಾಲಕೃಷ್ಣ ಶೆಟ್ಟಿ (48) ವಾಪಸ್ ಹೋಗುವಂತೆ ಸೂಚಿಸಿದ್ದರು. ಈ ವೇಳೆ ಜಗಳ ನಡೆದು ಪುನೀತ್ ಸಾಲ್ಯಾನ್ ತನ್ನ ಬೈಕ್ ಕೀ ಬಂಚ್ ನಲ್ಲಿದ್ದ ಚಾಕುವಿನಿಂದ ಶೆಟ್ಟಿಯವರ ಹೊಟ್ಟೆಗೆ ಇರಿದು, ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಗಾಯಾಳು ಶೆಟ್ಟಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.
ಬಂದರು ಪೊಲೀಸರು ಬಂಧಿತ ಆರೋಪಿಯನ್ನು ನಿನ್ನೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.