ಕುಂದಾಪುರ: ಜಾನುವಾರುಗಳನ್ನು ಹಿಂಸಾತ್ಮಕವಾಗಿ ಓಮ್ನಿಯಲ್ಲಿ ತುಂಬಿಕೊಂಡು ಸಾಗಾಟಕ್ಕೆ ಯತ್ನಿಸುತ್ತಿರುವ ವೇಳೆ ಕುಂದಾಪುರ ಪೊಲೀಸರು ಖಚಿತ ವರ್ತಮಾನದ ಮೇಲೆ ದಾಳಿ ನಡೆಸಿ ನಾಲ್ಕು ಜಾನುವಾರುಗಳನ್ನು ರಕ್ಷಿಸಿ, ಓಮ್ನಿ ಕಾರನ್ನು ವಶಕ್ಕೆ ಪಡೆದ ಘಟನೆ ಸೆ.6 ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಕಂಡ್ಲೂರು ಎಂಬಲ್ಲಿ ನಡೆದಿದ್ದು, ಪೊಲೀಸರ ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪರಾರಿಯಾದ ಆರೋಪಿಗಳ ಪೈಕಿ ಓರ್ವನನ್ನು ಜಾಕೀರ್ ಹುಸೇನ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಹೆಸರು ತಿಳಿದುಬಂದಿಲ್ಲ.
ಘಟನೆ ವಿವರ: ಆರೋಪಿಗಳು ಕಳವು ಮಾಡಿದ ದನಗಳನ್ನು ಮಾಂಸ ಮಾಡುವ ಸಲುವಾಗಿ ಹತ್ಯೆ ಮಾಡಲು ಓಮ್ನಿಯಲ್ಲಿ ಸಾಗಾಟ ಮಾಡುತ್ತಿದ್ದಾರೆಂಬ ಬಗ್ಗೆ ಕುಂದಾಪುರ ಉಪನಿರೀಕ್ಷಕರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ವೇಳೆ ಕಾವ್ರಾಡಿ ಗ್ರಾಮದ ಕಂಡ್ಲೂರು ಎಂಬಲ್ಲಿ ಈ ಓಮ್ನಿ ಪತ್ತೆಯಾಗಿತ್ತು. ಇದೇ ವೇಳೆ ಪೊಲೀಸರನ್ನು ನೋಡಿದ ಆರೋಪಿಗಳು ಕತ್ತಲಲ್ಲಿ ಪರಾರಿಯಾಗಿದ್ದು ಅವರಲ್ಲಿ ಓರ್ವನ ಗುರುತು ಪತ್ತೆಯಾಗಿಲ್ಲ. ಓಮ್ನಿಯನ್ನು ಪರಿಶೀಲಿಸಿದಾಗ ನಾಲ್ಕು ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಲಾಗಿದ್ದು ಅವುಗಳನ್ನು ರಕ್ಷಿಸಿ ಗೋಶಾಲೆಗೆ ರವಾನಿಸಲಾಗಿದೆ. ಒಂದು ಕರುವಿಗೆ ಕಾಲಿಗೆ ಗಾಯವಾಗಿದ್ದು ಅದಕ್ಕೆ ಚಿಕಿತ್ಸೆ ಕೊಡಿಸುವ ಕಾರ್ಯವೂ ನಡೆಯಿತು.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ಮಾರ್ಗದರ್ಶನದಲ್ಲಿ ಕುಂದಾಪುರ ಉಪನಿರೀಕ್ಷಕ ನಾಸೀರ್ ಹುಸೇನ್, ಹೆಡ್ ಕಾನ್ಸ್ಟೇಬಲ್ಗಳಾದ ವಿಠಲ, ವೆಂಕಟರಮಣ, ಚಂದ್ರ ಶೆಟ್ಟಿ, ಸಿಬ್ಬಂದಿಗಳಾದ ರಂಜಿತ್ ಶೆಟ್ಟಿ, ಪ್ರಸನ್ನ, ಲೋಕೇಶ್ ಮೊದಲಾದವರು ಈ ಕಾರ್ಯಾಚರಣೆಯಲಿದ್ದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.