ಕುಂದಾಪುರ: ಶಿರ್ಸಿಯಿಂದ ಜಿಂಕೆ ಚರ್ಮವನ್ನು ಅಕ್ರಮವಾಗಿ ಮಾರಾಟದ ಸಲುವಾಗಿ ಹಾಲಾಡಿಯಿಂದ ಕೋಟೇಶ್ವರ ಮಾರ್ಗವಾಗಿ ತರುತ್ತಿದ್ದ ವೇಳೆ ಖಚಿತ ವರ್ತಮಾನದ ಮೇರೆಗೆ ಕಾದಿದ್ದ ಪೊಲೀಸರು ಕೋಟೇಶ್ವರ ಸಮೀಪದ ಕಾಳಾವರ ಜಂಕ್ಷನ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿ ಜಿಂಕೆ ಚರ್ಮ ಸಹಿತ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಬಂಧಿತ ಆರೋಪಿಗಳು ಶಿರಸಿ ಮೂಲದ ಮಹಮ್ಮದ್ ಶಫಿ (26) ಮತ್ತು ಮುಸ್ತಾಫಾ (35). ಇವರಿಂದ ಸುಮಾರು 25 ಸಾವಿರ ಮೌಲ್ಯದ ಜಿಂಕೆ ಚರ್ಮ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ: ಶಿರ್ಸಿಯಿಂದ ಬೈಕೊಂದರಲ್ಲಿ ಆರೋಪಿಗಳು ಜಿಂಕೆ ಚರ್ಮವನ್ನು ಮಾರಾಟದ ಉದ್ಧೇಶದಿಂದ ಉಡುಪಿಯತ್ತ ಹಾಲಾಡಿ-ಕೋಟೆಶ್ವರ ಮಾರ್ಗದಲ್ಲಿ ಕೊಂಡೊಯುತ್ತಿರುವ ಬಗ್ಗೆ ಖಚಿತ ವರ್ತಮಾನ ಬಂದ ಹಿನ್ನೆಲೆಯಲ್ಲಿ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ಮಾರ್ಗದರ್ಶನದಲ್ಲಿ ಶನಿವಾರ ಮುಂಜಾನೆ ೫ ಗಂಟೆ ಸುಮಾರಿಗೆ ಕುಂದಾಪುರ ಠಾಣಾಧಿಕಾರಿ ಹಾಗೂ ಸಿಬ್ಬಂಧಿಗಳು ಕಾಳಾವರ ಜಂಕ್ಷನ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹಾಲಾಡಿ ಮಾರ್ಗವಾಗಿ ಬೈಕಿನಲ್ಲಿ ಬಂದ ಆರೋಪಿಗಳನ್ನು ನಿಲ್ಲಿಸಲು ಸೂಚಿಸಿದಾಗ ಇಬ್ಬರು ಆರೋಪಿಗಳು ಬೈಕಿನಿಂದ ಇಳಿದು ಅಲ್ಲಿಂದ ಕಾಲ್ಕೀಳಲು ಯತ್ನಿಸಿದ್ದಾರೆ. ಇದೇ ವೇಳೆ ಪೊಲೀಸರು ಇಬ್ಬರನ್ನು ಹಿಡಿದು ಕೈಯಲ್ಲಿದ್ದ ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಜಿಂಕೆಯ ಚರ್ಮವಿರುವುದು ಪತ್ತೆಯಾಗಿದೆ.
ಕುಂದಾಪುರ ಡಿವೈಎಸ್ಪಿ ಹಾಗೂ ವೃತ್ತನಿರೀಕ್ಷಕರ ಮಾರ್ಗದರ್ಶನದಲ್ಲಿ ಕುಂದಾಪುರ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್, ಅಪರಾಧ ಪತ್ತೆದಳದ ಹೆಡ್ಕಾನ್ಸ್ಟೇಬಲ್ ಉದಯ್ ಕುಂದರ್, ವಿಜಯ, ಸಿಬ್ಬಂದಿಗಳಾದ ಪ್ರಕಾಶ್, ಅಶ್ವಿನ್, ಸಂತೋಷ್, ನಾಗೇಂದ್ರ, ಪ್ರಸನ್ನ, ರಂಜಿತ್ ಶೆಟ್ಟಿ ಮೊದಲಾವರು ಕಾರ್ಯಾಚರಣೆಯ ತಂಡದಲ್ಲಿದ್ದರು.
ವನ್ಯಜೀವಿ ಸಂರಕ್ಷಣಾ ಕಾಯಿದೆ-೧೯೭೨ರಂತೆ ಆರೋಪಿಗಳ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.