ಮಂಗಳೂರು : ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆಗಳಲ್ಲಿ ವ್ಯಾಪಕ ಮಳೆಹಾನಿಯುಂಟಾಗಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ನಗರದ ಮುಖ್ಯ ರಸ್ತೆಗಳ ಮೇಲಿನಿಂದ ರಭಸವಾಗಿ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಳೆ ಆರ್ಭಟ :
ಕಳೆದೆರಡು ದಿನಗಳಿಂದ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಕೃಷಿ ಸೇರಿದಂತೆ ಮನೆ, ವಾಹನಗಳಿಗೆ ಹಾನಿ ಸಂಭವಿಸಿದೆ. ಮಳೆ ಆರ್ಭಟ ತಗ್ಗದ ಹಿನ್ನೆಲೆಯಲ್ಲಿ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಜು.20ರಂದು ರಜೆ ಸಾರಲಾಗಿದೆ.
ಮಂಗಳೂರು ನಗರದ ಪಾಂಡೇಶ್ವರ -ಮಂಗಳಾದೇವಿ ರಸ್ತೆಯ ಸುಭಾಶ್ ನಗರ, ಸಿಟಿ ಸೆಂಟರ್ ಮಾಲ್ ಮುಂದಿನ ಕೆ.ಎಸ್.ರಾವ್ ರಸ್ತೆ, ಹೊಯ್ಗೆ ಬಝಾರ್, ಕೊಟ್ಟಾರ ಚೌಕಿ, ಬಂದರು ಮತ್ತಿತರ ಕಡೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆಯಲ್ಲೇ ಹರಿಯಿತು. ಮನೆಯೊಳಗೆ ನುಗ್ಗಿದ ನೀರು: ಪಾಂಡೇಶ್ವರ ಸುಭಾಷ್ ನಗರ, ಕೊಟ್ಟಾರ ಚೌಕಿಯಲ್ಲಿ ತಗ್ಗುಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಮನೆ ಮಂದಿ ತೀವ್ರ ಸಮಸ್ಯೆಗೆ ಸಿಲುಕಿ ದರು. ಕೊಟ್ಟಾರ ಚೌಕಿ ಬಳಿ ರಸ್ತೆ ಬದಿ ಯಲ್ಲಿನ ತೋಡು ತುಂಬಿ ಹರಿದ ಪರಿಣಾಮ ಅಂಚಿನಲ್ಲಿರುವ ಅಂಗಡಿ, ಮನೆಗಳಿಗೆ ನೀರು ನುಗ್ಗಿತ್ತು.
ಕೊಣಾಜೆ ಸಮೀಪದ ಹರೇಕಳ ಗ್ರಾಮದ ಆದಂ ಹುಸೈನ್ ಎಂಬವರ ಮನೆಗೆ ನೆರೆ ನೀರು ನುಗ್ಗಿದೆ. ಉಳ್ಳಾಲ ಮಿಲ್ಲತ್ ನಗರದಲ್ಲಿ ಕೃತಕ ನೆರೆ ಆವರಿಸಿದೆ. ಪಡೀಲ್ ಮೇಲ್ಸೇತುವೆ ಬಳಿ ನೀರು ನಿಂತು ಅಪಾಯದ ವಾತಾವರಣ ಸೃಷ್ಟಿಯಾಗಿದೆ. ಬಿಜೈ ಆನೆಗುಂಡಿ 2ನೆ ಕ್ರಾಸ್ ರಸ್ತೆಯ ಬಳಿಯೂ ಹಲವು ಮನೆಗಳಿಗೆ ನೀರು ನುಗ್ಗಿದೆ. ಕೋಡಿಕಲ್ ಶಾಲೆಯ ಬಳಿ ಲೀಲಾಧರ ನಾಕ್, ಬಿಜೈ ಆನೆಗುಂಡಿಯ ನಾರಾಯಣ ಎಂಬವರ ಮನೆಗಳಿಗೆ ನೀರು ನುಗ್ಗಿದೆ. ಬಜಾಲ್ನಲ್ಲಿ ಗುಡ್ಡ ಕುಸಿದು ಉಷಾ ಎಂಬವರ ಮನೆಗೆ ಹಾನಿಯಾಗಿದೆ.
ಫರಂಗಿಪೇಟೆ ಸಮೀಪದ ಅಬ್ಬೆಟ್ಟು ಎಂಬಲ್ಲಿ ಗುಡ್ಡವೊಂದು ಕುಸಿದ ಪರಿಣಾಮ ಮನೆ ಯೊಂದಕ್ಕೆ ಹಾನಿಯಾಗಿದೆ. ಇವರ ಮನೆಯಂಗಳ ದಲ್ಲಿ ಕೃತಕ ನೆರೆ ಉಂಟಾ ಗಿದ್ದು, ಮನೆಯೊಳಗೂ ನೀರುನುಗ್ಗಿದೆ.
ಮೆಲ್ಕಾರ್ ಬಳಿ ಮರದ ಬೃಹತ್ ಕೊಂಬೆಯೊಂದು ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ತಕ್ಷಣ ಸ್ಥಳೀಯರು ಅದನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಾಲೆತ್ತೂರಿನಲ್ಲಿ ಬಾರೀ ಮಳೆಗೆ ಗುಡ್ಡವೊಂದು ಜರಿದು ಬಿದ್ದ ಪರಿಣಾಮ ಸಮೀಪದಲ್ಲಿ ನಿಲ್ಲಿಸಿದ ಬೈಕೊಂದು ಅಡಿಗೆ ಬಿದ್ದು ನಜ್ಜುಗುಜ್ಜಾಗಿದೆ.