ಮಂಗಳೂರು, ಜು.15: ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯೊಂದರಲ್ಲಿ ಅಂತಾರಾಜ್ಯ ಕಳವು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತನನ್ನು ಮಂಗಳೂರು ತಾಲೂಕಿನ ಮಂಜನಾಡಿಯ ಕಲಟ್ಟ ನಿವಾಸಿ ಮುಹಮ್ಮದ್ ರಫೀಕ್ ಯಾನೆ ರಿಕ್ಷಾ ರಫೀಕ್ ಎಂದು ಗುರುತಿಸಲಾಗಿದೆ.
ಆತನ ವಿರುದ್ಧ ಕೇರಳದಲ್ಲಿ ದರೋಡೆ, ಕೊಣಾಜೆ ಮೋಂಟುಗೋಳಿ ಹಾಗೂ ಕಂಬಳಪದವು ದೇವಸ್ಥಾನದ ಕಳವು, ಕುಂದಾಪುರ ದೇವಸ್ಥಾನದ ವಿಗ್ರಹ ಕಳವು, ಮಂಜೇಶ್ವರ ಹಾಗೂ ಕುಂಬ್ಳೆಯಲ್ಲಿ ಕಳವು, ಮಂಗಳೂರಿನಲ್ಲಿ ಅನೈತಿಕ ಚಟುವಟಿಕೆ ನಡೆಸಿದ ಪ್ರಕರಣ, ಕಣ್ಣೂರಿನಲ್ಲಿ ಮನೆಗೆ ನುಗ್ಗಿ ಕಳವು, ಬೆಂಗಳೂರಿನ ಉದ್ಯಮಿಯೊಬ್ಬರ ಅಪಹರಿಸಿದ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಹಲವು ಠಾಣೆಯಿಂದ ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದು, ಮುಲ್ಕಿ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿರುವುದಾಗಿ ಉಪ ಆಯುಕ್ತ ಶಾಂತರಾಜು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳ ಸೆರೆ:
ಮಂಗಳೂರು ವ್ಯಾಪ್ತಿಯಲ್ಲಿ ಸುಲಿಗೆ, ಕಳವು ಸೇರಿದಂತೆ 5 ಪ್ರಕರಣಗಳ ಪ್ರಮುಖ ಆರೋಪಿಗಳಾಗಿರುವ ಸೋಮೇಶ್ವರ ಕೆ.ಸಿ.ರೋಡಿನ ಅಲ್ತಾಫ್ ಮತ್ತು ತಣ್ಣೀರು ಬಾವಿಯ ರಾಜೇಶ್ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ನಗರದ ಸೆಂಟ್ರಲ್ ಮಾರ್ಕೆಟ್, ಸರ್ವಿಸ್ ಬಸ್ ನಿಲ್ದಾಣದ ಪ್ರದೇಶಗಳಲ್ಲಿ ಒಬ್ಬಂಟಿ ಯಾಗಿ ಇರುವ ಯುವಕರಿಗೆ ಚೂರಿಯಿಂದ ಇರಿದು ಸುಲಿಗೆ ನಡೆಸುವ ಆರೋಪ ಹೊಂದಿದ್ದರು. ಅಲ್ತಾಫ್ ಮಂಗಳೂರು ದಕ್ಷಿಣ ಠಾಣೆಯ ಹಾಗೂ ರಾಜೇಶ್ ಮಂಗಳೂರು ಉತ್ತರ ಠಾಣೆಯಲ್ಲಿ ಎರಡು ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಉಪ ಆಯುಕ್ತರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ಪೊಲೀಸ್ ಅಧಿಕಾರಿ ಎಸಿಪಿ ಕಲ್ಯಾಣ ಶೆಟ್ಟಿ ಮಾರ್ಗದರ್ಶನದಲ್ಲಿ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿ, ಪಿಎಸ್ಸೈ ಮುಹಮ್ಮದ್ ಶರೀಫ್ ಹಾಗೂ ಇತರ ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.