ಕುಂದಾಪುರ: ಶಿರೂರು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರತ್ನಾ ಕೊಠಾರಿಯ ಸಾವು ಸಂಭವಿಸಿ ಒಂದು ವರ್ಷವಾದರೂ ಅದರ ಕಾರಣವನ್ನು ಭೇದಿಸಲಾಗಿಲ್ಲ. ಆಕೆಯ ಕುಟುಂಬಕ್ಕೆ ಸರಕಾರ ಘೋಷಿಸಿದ್ದ ರೂ. 3 ಲಕ್ಷ ಪರಿಹಾರವನ್ನು ಈವರೆಗೆ ಪಾವತಿಸಿಲ್ಲ. ಇದರ ಹಿಂದೆ ಪೊಲೀಸರು ಮತ್ತು ಜನಪ್ರತಿನಿಧಿಗಳ ವೈಫಲ್ಯ ಎದ್ದು ಕಾಣುತ್ತದೆ ಎಂದು ಆರೋಪಿಸಿದ ಕಮ್ಯುನಿಸ್ಟ್ ಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಬೃಹತ್ ಜಾಥಾ ಮತ್ತು ಪ್ರತಿಭಟನೆ ನಡೆಯಿತು.
ಸಿಐಟಿಯು, ಡಿವೈಎಫ್ಐ, ಎಸ್ಎಫ್ಐ ಸಂಘಟನೆಗಳ ಕಾರ್ಯಕರ್ತರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ರತ್ನಾ ಕೊಠಾರಿಯ ಪೋಷಕರು ಹಾಗೂ ಸಾರ್ವಜನಿಕರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗುರುವಾರ ಬೆಳಿಗ್ಗೆ ಮೃತ ರತ್ನಾ ಕೊಠಾರಿ ನಿಗೂಢವಾಗಿ ಸಾವನ್ನಪ್ಪಿ ಮೂರು ದಿನಗಳ ಬಳಿಕ ಆಕೆಯ ಶವ ಪತ್ತೆಯಾಗಿದ ಸಾವಂತಗುಡ್ಡೆಯಿಂದ ಕಾಲ್ನಡಿಗೆಯಲ್ಲಿ ಹನ್ನೆರಡು ಕಿಲೋಮೀಟರು ನಡೆದು ಸಾಗಿ ಬಂzತೀ ಬೃಹತ್ ಪ್ರತಿಭಟನಾ ಮೆರವಣಿಗೆ ಶಿರೂರು ಪೇಟೆ ಮೂಲಕ ಸಾಗಿ ಬೈಂದೂರು ಪೇಟೆ ಮೂಲಕ ಆಗಮಿಸಿ ಬೈಂದೂರು ಶಾಸಕರ ಕಚೇರಿಯ ಎದುರು ಸಾವಿರಾರು ಸಂಖ್ಯೆಯಲ್ಲಿ ನೆರೆದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪ್ರತಿಭಡನಾಕಾರರು ರಾಜ್ಯ ಸರಕಾರ, ಸ್ಥಳೀಯ ಶಾಸಕರು ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ನ್ಯಾಯಕ್ಕಾಗಿ ಪ್ರತಿಭಟಿಸಿದರು.
ಈ ಸಂದರ್ಭ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ರತ್ನಾ ಕೊಠಾರಿಯ ಸಾವು ಸಂಭವಿಸಿ ಒಂದು ವರ್ಷ ಕಳೆದರೂ ಆಕೆಯ ಮರಣದ ಕಾರಣವನ್ನು ಬಹಿರಂಗಪಡಿಸಿಲ್ಲ. ಇದರ ವೈಫಲ್ಯದ ಫಲವಾಗಿಯೇ ಅಕ್ಷತಾ ದೇವಾಡಿಗಳ ಕೊಲೆ ನಡೆಯುವಂತಾಯಿತು. ಇನ್ನಾದರೂ ಪೊಲೀಸರು ಆಕೆಯ ಸಾವಿನ ಕಾರಣ ಬಹಿರಂಪಡಿಸಬೇಕು. ಸರಕಾರ ಈ ಹಿಂದೆ ಭರವಸೆ ನೀಡಿದ್ದ ಪರಿಹಾರವನ್ನು ಆಕೆಯ ಕುಟುಂಬಕ್ಕೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಒಂದು ವಾರದೊಳಗೆ ಇದು ಈಡೇರದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂದರ್ಭ ಅವರು ಎಚ್ಚರಿಸಿದರು. ಶಾಸಕರ ಅನುಪಸ್ಥಿತಿಯಲ್ಲಿ ತಮ್ಮ ಬೇಡಿಕೆಯನ್ನೊಳಗೊಂಡ ಮನವಿಯನ್ನು ಅವರ ಆಪ್ತಸಹಾಯಕರಿಗೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಭಯದಿಂದ ಸಾಗಬೇಕಾದ ಅನಿವಾರ್ಯತೆ ಇತೀಚಿನ ದಿನಗಳಲ್ಲಿ ಹೆಚಾಗಿದೆ. ಈ ಬಗ್ಗೆ ಸಂಬಂದಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ನೆರೆದ ವಿದ್ಯಾರ್ಥಿನಿಯರು ಆಗ್ರಹಿಸಿದರು.
ಇದೇ ಸಂದರ್ಭ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು, ವಿವಿಧ ಸಂಘಟನೆಗಳ ಪ್ರಮುಖರಾದ ರಾಜೇಶ ವಡೇರಹೋಬಳಿ, ರವಿರಾಜ್, ಸುರೇಶ ಕಲ್ಲಾಗರ, ವೆಂಕಟೇಶ ಕೋಣಿ, ಶ್ರೀಕಾಂತ ಹೆಮ್ಮಾಡಿ, ಭಾಸ್ಕರ ಶೆಟ್ಟಿ, ರಾಜೀವ ಪಡುಕೋಣೆ ಇತರರು ಇದ್ದರು.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ, ಎಸ್ಐ ಸಂತೋಷ ಕಾಯ್ಕಿಣಿ, ಗಂಗೊಳ್ಳಿ ಎಸ್ಐ ಬಿ. ಸುಬ್ಬಣ್ಣ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.