Pics : Sathish Kapikad
ಮಣಿಪಾಲ, ಜೂ.29: ಮಾಧ್ಯಮಗಳಿಗೆ ಅದರದ್ದೇ ಆದ ಜವಾಬ್ದಾರಿ ಇದೆ. ಕಾಲಕಾಲಕ್ಕೆ ಅದನ್ನು ಪ್ರಶ್ನಿಸುವವರೂ ಇದ್ದಾರೆ. ಆದುದರಿಂದ ಮಾಧ್ಯಮಗಳು ಇಂದಿಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದು ಝಿ ಬಿಸಿನೆಸ್ ಚಾನೆಲ್ನಲ್ಲಿ ಡಿಎಸ್ಸಿ ಶೋ ನಡೆಸಿ ಕೊಡುತ್ತಿರುವ ಝೀ ಟಿವಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಎಸ್ಸೆಲ್ ಕಂಪೆನಿಯ ಪ್ರಾಯೋಜಕ ಡಾ.ಸುಭಾಶ್ಚಂದ್ರ ಹೇಳಿದ್ದಾರೆ.
ಎಸ್ಸೆಲ್ ಸಂಸ್ಥೆ ಮತ್ತು ಜೀ ಸಮೂಹದ ಸಂಯೋ ಜನೆಯಲ್ಲಿ ಮಣಿಪಾಲದ ವ್ಯಾಲಿವ್ಯೆ ಹೊಟೇಲ್ನ ಚೈತ್ಯ ಹಾಲ್ನಲ್ಲಿ ಸೋಮವಾರ ಆಯೋಜಿಸಲಾದ ಟ್ಯಾಪ್ಮಿ ವಿದ್ಯಾರ್ಥಿಗಳೊಂದಿಗೆ ( ಸಂವಾದ) ಡಿಎಸ್ಸಿ ಶೋ ಚಿತ್ರೀಕರಣದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಇಂದು ಸಾಮಾಜಿಕ ಜಾಲತಾಣಗಳು ತುಂಬಾ ಪ್ರಾಮುಖ್ಯತೆ ಪಡೆಯುತ್ತಿವೆ. ಮಾಧ್ಯಮಗಳಂತೆ ಸಾಮಾಜಿಕ ಜಾಲತಾಣಗಳು ಇಂದು ಸುದ್ದಿಗಳನ್ನು ನೀಡುತ್ತಿವೆ. ಹಾಗಾಗಿ ಸಾಮಾಜಿಕ ಜಾಲತಾಣಗಳು ಮಾಧ್ಯಮಗಳಿಗೆ ಇಂದು ಪೂರಕವಾಗಿವೆ. ಸಾಮಾಜಿಕ ಜಾಲತಾಣಗಳಿಗೂ ಜವಾಬ್ದಾರಿ ಎಂಬುದು ಇದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಸಂಪ ನ್ಮೂಲಗಳನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
ಇಂದು ಎಲ್ಲರೂ ಉದ್ಯೋಗ ಸಿಗುವ ಬಗ್ಗೆ ಆಲೋಚನೆ ಮಾಡುತ್ತಾರೆ. ಯಾಕೆಂದರೆ ಅಲ್ಲಿ ಜವಾಬ್ದಾರಿ ಕಡಿಮೆ ಇರುತ್ತದೆ. ಆದರೆ ಇದು ನಮ್ಮ ಗುರಿ ಆಗಬಾರದು. ಆದುದರಿಂದ ಉದ್ಯಮದ ಕಡೆ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಇದರಿಂದ ಮುಂದೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳಲ್ಲಿ ಸಣ್ಣ ಸಣ್ಣ ಉದ್ಯಮಗಳ ಬಗ್ಗೆ ಆಸಕ್ತಿ ಮೂಡಿಸಿ ಅದಕ್ಕೆ ಪ್ರೋತ್ಸಾಹ ನೀಡುವುದು ಈ ಟಿವಿ ಶೋದ ಉದ್ದೇಶವಾಗಿದೆ. ಉದ್ಯಮ ಕ್ಷೇತ್ರದ ನನ್ನ ಅನುಭವವನ್ನು ಯುವ ಸಮುದಾಯಕ್ಕೆ ಅರ್ಪಣೆ ಮಾಡುತ್ತಿದ್ದೇನೆ. ಇದು ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಶೋ ಆಗಿದೆ. ಇಲ್ಲಿನ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸದ್ಯಕ್ಕೆ ಈ ಶೋಗೆ ಜಗತ್ತಿನಾದ್ಯಂತ ಸುಮಾರು 25 ಮಿಲಿಯನ್ ಪ್ರೇಕ್ಷಕರಿದ್ದಾರೆ ಎಂದರು.
Pics By Sathish Kapikad