ಮಂಗಳೂರು, ಜೂ.30: ಮುಂಗಾರು ಆರಂಭ ಗೊಂಡು ಕೆಲ ದಿನಗಳು ಕಳೆದರೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ, ಪಂಪ್ಹೌಸ್ ನೀರಿನಲ್ಲಿ ಸತ್ತ ಹೆಗ್ಗಣ ಪತ್ತೆಯಾದ ವಿಷಯ ಮನಪಾ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ, ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಾದ ರಾಧಾಕೃಷ್ಣ, ಚಿಲಿಂಬಿಯಲ್ಲಿ ಎಡಿಬಿಯಿಂದ ನೀರು ಪೂರೈಕೆ 8 ತಿಂಗಳ ಹಿಂದೆ ಆರಂಭಗೊಂಡಿದ್ದರೂ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ, ಯಾಕೆ ಎಂದು ಪ್ರಶ್ನಿಸಿದರು. ಈ ಸಂದರ್ಭ ಸದಸ್ಯ ರಜನೀಶ್, ಎರಡು ದಿನಗಳಿಗೊಮ್ಮೆ ಬರುವ ನೀರೂ ಪೂರೈಕೆಯಾಗದಿದ್ದರೆ ಜನರ ಪರಿಸ್ಥಿತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಲ್ಲಕಾಡಿಗೆ ಮಳೆಗಾಲದಲ್ಲೂ ಸಮರ್ಪಕ ವಾಗಿ ನೀರು ಪೂರೈಕೆಯಾಗುತ್ತಿಲ್ಲ. ಪಂಪ್ಹೌಸ್ನಲ್ಲಿ ಸತ್ತ ಹೆಗ್ಗಣವಿದೆ. ನೀರಿನ ಪಂಪ್ಹೌಸ್ನ ಟ್ಯಾಂಕ್ಗೆ ಮುಚ್ಚಳವೇ ಇಲ್ಲ. ಈ ಬಗ್ಗೆ ಅಧಿಕಾರಿಯನ್ನು ಮೊಬೈಲ್ ಕರೆಯ ಮೂಲಕ ವಿಚಾರಿಸಿದಾಗ ಅವರು ಮುಚ್ಚಳ ಇರುವುದಾಗಿ ಹೇಳಿದ್ದರು. ಆದರೆ ನಾನು ಖುದ್ದಾಗಿ ಪರಿಶೀಲಿಸಿದಾಗ ಪಂಪ್ಹೌಸ್ನಲ್ಲಿ ನೀರಿನ ಟ್ಯಾಂಕ್ಗೆ ಮುಚ್ಚಳವೇ ಇರಲಿಲ್ಲ. ನಾನದರ ಚಿತ್ರವನ್ನು ಮೊಬೈಲ್ನಲ್ಲಿ ಸೆರೆಹಿಡಿದು ತಂದಿದ್ದೇನೆ. ಹಲವಾರು ದಿನಗಳಿಂದ ನನ್ನ ವಾರ್ಡ್ನ ಜನರಿಗೆ ಸತ್ತ ಹೆಗ್ಗಣದ ನೀರನ್ನು ಪೂರೈಕೆ ಮಾಡಲಾಗಿದೆ ಎಂದು ಸದಸ್ಯೆ ಕವಿತಾ ಸನಿಲ್ ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಂಪ್ಹೌಸ್ನಲ್ಲಿ ಸತ್ತ ಹೆಗ್ಗಣದ ಬಗ್ಗೆ ವಿಚಾರಿಸಿದಾಗ, ತುಂಬೆ ಅಣೆಕಟ್ಟಿನ ನೀರಿನಲ್ಲಿ ಸತ್ತ ಮಾನವನದ ದೇಹವೂ ಇರುತ್ತದೆ. ಅದನ್ನೆಲ್ಲಾ ನೀವು ಹೋಗಿ ನೋಡುತ್ತೀರಾ ಎಂಬ ಉಡಾಫೆಯ ಉತ್ತರವನ್ನು ಪಂಪ್ಹೌಸ್ನ ವ್ಯಕ್ತಿಯೊಬ್ಬರು ನೀಡಿದ್ದಾರೆ ಎಂದು ಕವಿತಾ ಸನಿಲ್ ಹೇಳಿದರು. ಸದಸ್ಯರ ದೂರಿನ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೇಯರ್ ಜೆಸಿಂತಾ ಅಧಿಕಾರಿಗಳಿಗೆ ಆದೇಶಿಸಿದರು.
ಆ್ಯಂಟನಿ ವೇಸ್ಟ್ ಮ್ಯಾನೇಜ್ಮಂಟ್ ಬಗ್ಗೆ ಆಡಳಿತ ಪಕ್ಷದ ಸದಸ್ಯರಿಂದಲೇ ಆಕ್ಷೇಪ
ಮನಪಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವ ಹಣೆಗೆ ಏಳು ವರ್ಷಗಳ ಅವಧಿಗೆ ಗುತ್ತಿಗೆ ವಹಿಸಿ ಕೊಂಡಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಇಂದು ಆಡಳಿತ ಪಕ್ಷದ ಸದಸ್ಯರಿಂದಲೂ ಸಭೆಯಲ್ಲಿ ವ್ಯಕ್ತವಾಯಿತು.
ಸದಸ್ಯ ಎ.ಸಿ.ವಿನಯರಾಜ್ ವಿಷಯ ಪ್ರಸ್ತಾಪಿ ಸಿ, ಚರಂಡಿಗಳಿಂದ ಹೂಳೆತ್ತುವ ಸಂದರ್ಭ ದೊರಕುವ ಮರಳು ಮಿಶ್ರಿತ ಮಣ್ಣನ್ನು ಲೋಡ್ಗಟ್ಟಲೆ ಪಚ್ಚನಾಡಿಯ ಡಂಪಿಂಗ್ ಯಾರ್ಡ್ಗೆ ಸಾಗಿಸುವ ಮೂಲಕ ಇದೀಗ ಅಲ್ಲಿ ಕಸದ ರಾಶಿ ಹೆಚ್ಚಿದೆ. ಮಾತ್ರವಲ್ಲದೆ ಕಂಪನಿಯ ಟನ್ ವ್ಯವ ಹಾರದಲ್ಲೂ ಹೆಚ್ಚಳ ಕಂಡುಬಂದಿದ್ದು, ಇದರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹಣವನ್ನು ಮನಪಾ ಕಂಪನಿಗೆ ಪಾವತಿಸಬೇಕಾದ ಪರಿಸ್ಥಿತಿ ತಲೆದೋರಿದೆ ಎಂದು ಆಕ್ಷೇಪಿಸಿದರು.
ಸದಸ್ಯ ಅಬ್ದುರ್ರವೂಫ್ ಇದಕ್ಕೆ ಪೂರಕವಾಗಿ ಮಾತನಾಡಿ, ಈಗಾಗಲೇ ಜನರಿಂದ ಕಸ ಸಂಗ್ರಹಕ್ಕೆ ಸಂಬಂಧಿಸಿ ಹಣ ವಸೂಲು ಮಾಡಲಾಗುತ್ತಿದೆ. ಆದರೆ ಶೇ.60ರಷ್ಟು ಕಡೆಗಳಿಂದ ಮಾತ್ರವೇ ಕಸ ಸಂಗ್ರಹವಾಗುತ್ತಿದೆ. ಆರೋಗ್ಯ ನಿರೀಕ್ಷಕರ ದಿನನಿತ್ಯದ ವರದಿಯಲ್ಲಿ ಸಮರ್ಪಕ ರೀತಿಯಲ್ಲಿ ಕಸ ವಿಲೇ ಆಗದಿರುವುದನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ಕಂಪನಿಯವರು ಮಾಡಿರುವ ಕೆಲಸಕ್ಕೆ ಮಾತ್ರವೇ ಹಣ ಪಾವತಿ ಮಾಡಿ ಉಳಿದ ಹಣದಲ್ಲಿ ಬೇರೆ ಗುತ್ತಿಗೆದಾರರ ಮೂಲಕ ಕಸ ಸಂಗ್ರಹಿಸಬೇಕು ಎಂದು ಹೇಳಿದರು. ನಮ್ಮಲ್ಲಿ ಮೂವರು ತಜ್ಞ ಪರಿಸರ ಎಂಜಿನಿ ಯರ್ಗಳಿದ್ದರೂ ಮನೆಗಳಿಂದ ಸಂಗ್ರಹಿಸಲಾಗುವ ಕಸವನ್ನು ಬೇರ್ಪಡಿಸುವ ಕಾರ್ಯ ಇನ್ನೂ ಸಮಪರ್ಕಕವಾಗಿ ನಡೆಯುತ್ತಿಲ್ಲ. ವಾಣಿಜ್ಯ ಮಳಿಗೆ ಗಳು, ಹೊಟೇಲ್ಗಳಿಂದ ಕಸ ಸಂಗ್ರಹವಾಗುತ್ತಿಲ್ಲ. ಅವರು ಕಸದ ತೊಟ್ಟಿಗಳಲ್ಲೇ ಕಸ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ವ್ಯವಸ್ಥೆ ಕುಂಠಿತ ಆಗಿದೆ ಎಂದು ಪ್ರೇಮಾನಂದ ಶೆಟ್ಟಿ ಆರೋಪಿಸಿದರು.
ಹೀಗೆಯೇ ಮುಂದುವರಿದರೆ ಮನಪಾದಿಂದ ಆ್ಯಂಟನಿ ಸಂಸ್ಥೆಗೆ ವಾರ್ಷಿಕ 18 ಕೋಟಿ ರೂ. ಅಲ್ಲ 30 ಕೋಟಿ ರೂ.ಗಳನ್ನು ನೀಡಬೇಕಾದೀತು ಎಂದು ಸುಧೀರ್ ಶೆಟ್ಟಿ ಹೇಳಿದರು. ಚರಂಡಿಗಳ ಹೂಳೆತ್ತಿದ ಮಣ್ಣು ಘನ ತ್ಯಾಜ್ಯವೇ? ಅದನ್ನು ಪಚ್ಚನಾಡಿಯ ಲ್ಯಾಂಡ್ಫಿಲ್ಗೆ ಸಾಗಿಸುವುದು ಎಷ್ಟು ಸರಿ ಎಂದು ವಿನಯ ರಾಜ್ ಪ್ರಶ್ನಿಸಿದರು. ಪರಿಸರ ಎಂಜಿನಿಯರ್ ಮಧು ಉತ್ತರಿಸಿ, ಮನಪಾ ಘನತ್ಯಾಜ್ಯ ನಿರ್ವಹಣೆ ಕಾಯ್ದೆಯಡಿ ಚರಂಡಿಯ ಹೂಳೆತ್ತುವ ಕಸವನ್ನೂ ತ್ಯಾಜ್ಯವೆಂದೇ ಪರಿಗಣಿಸಲಾಗುತ್ತದೆ ಎಂದು ಹೇಳಿದರು. ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಮಾತನಾಡಿ, 15 ದಿನಗಳಿ ಗೊಮ್ಮೆ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಸಮರ್ಪಕ ಪ್ರಗತಿ ಪರಿಶೀಲನೆಗೆ ಸ್ಥಾಯಿ ಸಮಿತಿ ನಿರ್ಧರಿಸಿದೆ ಎಂದು ಹೇಳಿದರು.
ಇದೇ ವೇಳೆ ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಯ ಅಧ್ಯಕ್ಷ ಹರಿನಾಥ್ ಪ್ರತಿಕ್ರಿಯಿಸಿ, ಯೋಜನೆ ಆರಂಭಿಸುವ ಸಂದರ್ಭದಲ್ಲೇ ಆ್ಯಂಟನಿ ಸಂಸ್ಥೆಗೆ ಏಳು ವರ್ಷಗಳಿಗೆ ಗುತ್ತಿಗೆ ವಹಿಸುವ ಬದಲು ಎರಡು ತಿಂಗಳಿಗೆ ಕೊಟ್ಟು ನೋಡುವ ಎಂದು ಹೇಳಿದ್ದೆ. ಆ್ಯಂಟನಿ ಸಂಸ್ಥೆ ಬಂದಿರುವುದೇ ಕಾರ್ಪೊರೇಶನ್ನ ದಿವಾಳಿ ಮಾಡಲು. ಈಗ ನಾವು ಹಳೆಯ ಗುತ್ತಿಗೆದಾರರನ್ನೇ ನೆನಪಿಸುವಂತಾಗಿದೆ ಎಂದರು.
ಮಂಜೂರಾತಿ ಇಲ್ಲದೆ ಹಣ ಪಾವತಿ
ಹೈದರಾಬಾದ್ನ ಫೆಡರಲ್ ಕಂಟೆಜೆನ್ಸಿ ಫಾರಂನವರು 2014ರ ಜೂನ್ 24ರಿಂದ 27ರವರೆಗೆ ನಗರದ ಹಿಂದಿ ಪ್ರಚಾರ ಭವನ ಮತ್ತು ಸ್ಕೌಟ್ ಭವನದಲ್ಲಿ ಉಳಿದುಕೊಂಡಿದ್ದ ಖರ್ಚುವೆಚ್ಚವಾದ 1.19 ಲಕ್ಷ ರೂ.ಗಳನ್ನು ಅಧಿಕಾರಿಗಳು ಯಾವುದೇ ಆಡಳಿತಾತ್ಮಕ ಮಂಜೂರಾತಿ ಇಲ್ಲದೆ ಪಾವತಿಸುವ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಲಾಗಿದೆ. ಇಂತಹ ಹಲವಾರು ಅಕ್ರಮ ಗಳು ಮನಪಾದಲ್ಲಿ ಅಧಿಕಾರಿಗಳಿಂದ ನಡೆಯು ತ್ತಿದೆ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ಸಭೆಯಲ್ಲಿ ಆರೋಪಿಸಿದರು.
ಮನಪಾದಲ್ಲಿ ಪರಿಷತ್ತಿನ ಅನುಮೋದನೆ ಇಲ್ಲದೆ ಹಣ ಪಾವತಿ ಮಾಡಿರುವ ಅನೇಕ ಉದಾಹರಣೆಗಳಿವೆ. ಪರಿಷತ್ತಿನ ಸ್ಥಾಯಿ ಸಮಿತಿಯ ಗಮನಕ್ಕೂ ಬಾರದೆ ಹಣ ಪಾವತಿ ಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಪ್ರೇಮಾನಂದ ಶೆಟ್ಟಿಯೂ ದನಿಗೂಡಿಸಿದರು.
ಸಭೆಯಲ್ಲಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್, ದೀಪಕ್ ಕೆ. ಪೂಜಾರಿ, ಕೇಶವ, ಪ್ರಭಾರ ಆಯುಕ್ತ ಗೋಕುಲ್ದಾಸ್ ಉಪಸ್ಥಿತರಿದ್ದರು.