ಮಂಗಳೂರು, ಜೂ.25: ತಾಲೂಕಿನ ಸೋಮೇಶ್ವರ ಗ್ರಾಮದ ಶಾಲೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 70000 ರೂ. ನಗದು ಹಣವನ್ನು ದೋಚಿದ್ದಾರೆ. ಸೋಮೇಶ್ವರ ಗ್ರಾಮದ ಕೊಲ್ಯ ಸೈಂಟ್ ಜೋಸೆಫ್ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಕಳ್ಳತನ ನಡೆದಿದೆ.
ಶಾಲೆಯನ್ನು ಮೊನ್ನೆ ಸಂಜೆ ಎಂದಿನಂತೆ ಮುಚ್ಚಿದ್ದು, ನಿನ್ನೆ ಬೆಳಿಗ್ಗೆ 7.30ರ ಸುಮಾರಿಗೆ ಮುಖ್ಯ ಶಿಕ್ಷಕಿ ವೀಣಾ ಅವರು ಶಾಲೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಎದುರಿನ ಗೇಟ್ ಮತ್ತು ಕಚೇರಿಯ ಬೀಗಗಳನ್ನು ಮುರಿದು ಒಳನುಗ್ಗಿದ ಕಳ್ಳರು ಎರಡು ಟೇಬಲ್ ಗಳ ಡ್ರಾವರ್ ನಲ್ಲಿರಿಸಿದ್ದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಸುಮಾರು 70000 ರೂ. ಗಳನ್ನು ಲಪಟಾಯಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.