ರಸ್ತೆ ಸರಿಪಡಿಸಿ- ಬಸ್ ವ್ಯವಸ್ಥೆ ಕಲ್ಪಿಸಿ ಇಲ್ಲವಾದಲ್ಲಿ ಶಾಲೆಗೆ ಹೋಗೆವು ಎಂದು ಹಠ ಹಿಡಿದ ವಿದ್ಯಾರ್ಥಿಗಳು
ಹೆಣ್ಣು ಮಕ್ಕಳನ್ನೂ ಹೆತ್ತಿದ್ದೇ ತಪ್ಪಾ..? ಅವರ ಭವಿಷ್ಯ ರೂಪಿಸಿಕೊಳ್ಳಲು ಶಾಲೆಗೆ ಕಳಿಸಿದ್ದೇ ತಪ್ಪಾ..? ಅಮ್ಮಾ ನಾನಿದ್ದೇನೆ, ನನ್ನ ತಂಗಿಯರನ್ನ ನಾನು ಓದಿಸುತ್ತೇನೆ, ಚಿಂತೆ ಮಾಡಬೇಡ ಎಂದಿದ್ದ ಮಗಳನ್ನು ಪಾಪಿಗಳು ಕೊಂದರು..? ಬಡವರು ಬದುಕೋಕೆ ಕಾಲವೇ ಇಲ್ಲವೇ..? ನನ್ನ ಮಗಳನ್ನೂ ತಂದುಕೊಡುವಿರಾ..? ಆಗುವುದಿಲ್ಲ.. ಆದರೇ ಮುಂದೆ ಯಾವ ತಾಯಿಗೂ ಈ ರೋಧನೆ ಬಾರದ ಹಾಗೇ ಮಾಡಿ ಸರ್… ಇದು ಆ ಹೆತ್ತಬ್ಬೆ ನೋವಿನ ಆಕ್ರಂಧನ..
ನಿಗೂಢವಾಗಿ ಕೊಲೆಯಾದ ಅಕ್ಷತಾ ದೇವಾಡಿಗ ಅವರ ಮನೆಗೆ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಶುಕ್ರವಾರ ಭೇಟಿಯಿತ್ತ ಸಂದರ್ಭ ಅಕ್ಷತಾ ತಾಯಿ ರಾಧಾ ಗೋಳಾಡಿದ ಪರಿಯಿದು.
ಶುಕ್ರವಾರ ಸಂಜೆ ಮೃತ ಅಕ್ಷತಾ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಕಿಮ್ಮನೆ, ಪ್ರಕರಣದ ಸತ್ಯ ಸತ್ಯತೆಯನ್ನು ಭೇದಿಸಿ, ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ದವಿದೆ ಎಂದು ತಿಳಿಸಿದರು.
ಹೆನ್ಬೇರು ಕುಗ್ರಾಮ ಪ್ರದೇಶವಾಗಿದ್ದು, 5-6 ಕಿ.ಮೀ ವಿದ್ಯಾರ್ಥಿಗಳು ನಿರ್ಜನ ಪ್ರದೇಶದ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕಾಗುತ್ತದೆ. ಬಸ್ನ ವ್ಯವಸ್ಥೆ ಇಲ್ಲ, ಹೆದ್ದಾರಿಯಲ್ಲಿ ಕ್ರಮಿಸುವ ಎಕ್ಸ್ಪ್ರೆಕ್ಸ್ ಬಸ್ಸ್ಗಳು ಹೆನ್ಬೇರು ಕ್ರಾಸ್ನಲ್ಲಿ ನಿಲ್ಲಿಸುವುದಿಲ್ಲ, ಕಾಲೇಜಿನ ಪ್ರತಿ ಕ್ಲಾಸ್ಗಳನ್ನು ಪ್ರತ್ಯೇಕ ಸಮಯಕ್ಕೆ ಬಿಡುವುದರಿಂದ ಗ್ರಾಮೀಣ ಭಾಗಕ್ಕೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು ಪೋಷಕರು ಸಚಿವರ ಮುಂದೆ ಸಮಸ್ಯೆಗಳ ತೆರೆದಿಟ್ಟರು.
ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಈ ಪರಿಸರದ ವಿದ್ಯಾರ್ಥಿನಿಯರು ಈ ಘಟನೆಯಿಂದ ನಾವು ಭಯಭೀತರಾಗಿದ್ದು, ನಾವು ಶಾಲಾ ಕಾಲೇಜುಗಳಿಗೆ ಹೋಗುವುದಿಲ್ಲ. ಈ ಭಾಗಕ್ಕೆ ಬಸ್ನ ವ್ಯವಸ್ಥೆಯಿಲ್ಲ. ಕಾಲು ದಾರಿಯಲ್ಲಿ ಹೋಗಲು ಭಯವಾಗುತ್ತದೆ. ಕಾಡು ದಾರಿಯಾದ್ದರಿಂದ ಅಪರಿಚಿತ ವ್ಯಕ್ತಿಗಳು ಸಾಕಷ್ಟು ಸಂಖ್ಯೆಯಲ್ಲಿ ತಿರುಗಾಡುತ್ತಿರುತ್ತಾರೆ. ನಮಗೆ ಸೂಕ್ತ ವಾಹನದ ವ್ಯವಸ್ಥೆ ಸರ್ಕಾರದ ವತಿಯಿಂದ ಕಲ್ಪಿಸಬೇಕು. ಅಲ್ಲಿಯ ತನಕ ನಾವು ಶಾಲಾ ಕಾಲೇಜುಗಳಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿನಿ ಅಕ್ಷತಾ ಸಾವು ಹೇಗಾಯಿತು ಎನ್ನುವುದರ ಬಗ್ಗೆ ಸಮಗ್ರ ತನಿಖೆ ಆಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇನ್ನೂ ಮುಂದೆ ಇಂಥಹ ಘಟನೆ ಆಗದಂತೆ ಇಲಾಖೆ, ಸರ್ಕಾರ ಮುಂಜಾಗೃತೆ ವಹಿಸಬೇಕು ಎಂದು ಅಕ್ಷತಾ ಕುಟುಂಬವರ್ಗ ಸಚಿವರನ್ನು ಒತ್ತಾಯಿಸಿದರು.
ಈ ಸಂದರ್ಭ ಮಾದ್ಯಮದವರ ಜೊತೆ ಪ್ರತಿಕ್ರಿಯಿಸಿದ ಸಚಿವ ಕಿಮ್ಮನೆ, ವಿದ್ಯಾರ್ಥಿಯ ಸಾವು ಅತೀವ ಬೇಸರ ತಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಈಗಾಗಲೇ ತನಿಖೆ ಆರಂಭಿಸಿದೆ. ತನಿಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಹಾಗೆಯೇ ಈ ಭಾಗಕ್ಕೆ ಅನುಕೂಲವಾಗುವಂತೆ ರಾಘವೇಂದ್ರ ಮಠದ ಹತ್ತಿರ ಬಸ್ಗಳಿಗೆ ನಿಲುಗಡೆ ನೀಡಲು ನಾಳೆನೇ ಆರ್ಟಿಓ ಸಭೆಯಲ್ಲಿ ಸೂಚಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ಭಾಗದ ವಿದ್ಯಾರ್ಥಿಗಳ ಭೇಡಿಕೆಯಾದ ವಾಹನದ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು. ಕಾಲೇಜು ಬಿಡುವ ವೇಳೆಯ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು. ಬೈಂದೂರು ಕಾಲೇಜಿನ ಕೊಠಡಿ, ಶೌಚಾಲಯದ ನಿರ್ಮಾಣಕ್ಕೆ ೩೦ ಲಕ್ಷ ಮಂಜೂರು ಮಾಡಲಾಗುವುದು ಎಂದರು.
ಈ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸಿಗವ ಸಹಕಾರವನ್ನು ಒದಗಿಸಲಾಗುವುದು. ಪ್ರಕರಣದ ಸತ್ಯಾಸತ್ಯತೆ ಶೀಘ್ರ ಗೊತ್ತಾಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ.ಗೋಪಾಲ ಪೂಜಾರಿ, ತಾ.ಪಂ.ಸದಸ್ಯ ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.