ಪುತ್ತೂರು, ಜೂ.13: ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್. ಸಚಿವರು ಬರುತ್ತಾರೆ ಎಂದರೆ ಸಾಕು. ಸಾಮಾನ್ಯವಾಗಿ ಪೊಲೀಸು, ಬೆಂಬಲಿಗರು, ಹಿಂಬಾಲಕರ ದಂಡೇ ಜೊತೆಗೆ ಬರುವುದು ವಾಡಿಕೆ. ಜನ ಸಾಮಾನ್ಯರು ಸಚಿವರನ್ನು ಮಾತನಾಡಿಸಲೂ ಅಸಾಧ್ಯ ಎಂಬ ವಾತಾವರಣ ಅಲ್ಲಿ ನಿರ್ಮಾಣವಾಗಿರುತ್ತದೆ. ಸಚಿವರುಗಳಿಗೂ ಹಾಗೆಯೇ ದೊಡ್ಡ ದಂಡು ಜೊತೆಗಿದ್ದರೇನೇ ಸಂತೋಷ. ಆದರೆ ಕೆಲವು ಸಚಿವರು ಮಾತ್ರ ಇದಕ್ಕೆ ಅಪವಾದ ಎಂಬಂತಿದ್ದಾರೆ. ಅವರ ಸಾಲಿನಲ್ಲಿ ಕಾಣಸಿಗುತ್ತಾರೆ ಖಾದರ್.
ಶುಕ್ರವಾರ ಮಂಗಳೂರಿನಿಂದ ಮೈಸೂರಿಗೆ ತೆರಳುವ ಸಂದರ್ಭ ದಾರಿ ಮಧ್ಯೆ ಸಿಗುವ ಪುತ್ತೂರು ಬಳಿಯ ಸಂಪ್ಯದ ಮುಹಿಯುದ್ದೀನ್ ಮಸೀದಿಯಲ್ಲಿ ಮಧ್ಯಾಹ್ನ ನಮಾಝ್ ಮುಗಿಸಿದವರೇ ನೇರ ಅಲ್ಲೇ ಇದ್ದ ಹಕೀಂ ಎಂಬವರ ಸಣ್ಣ ತಟ್ಟಿ ಕ್ಯಾಂಟೀನ್ಗೆ ತೆರಳಿ ಗಂಜಿ ಊಟ ಸವಿದರು. ತುಳುನಾಡಿನ ಕೋಳಿ ಪುಳಿಮುಂಚಿ, ಹೊಟೇಲ್ಗೆ ಬಂದ ಜನಸಾಮಾನ್ಯರೊಂದಿಗಿನ ಹರಟೆ ಅವರಿಗೆ ಊಟದ ಜೊತೆ ಸಾಥ್ ನೀಡಿತ್ತು. ಎಲ್ಲರೊಂದಿಗೆ ಬೆರೆಯುತಾ ನಾನೂ ನಿಮ್ಮ ಹಾಗೇ ಎಂಬ ಭಾವನೆಯನ್ನು ಖಾದರ್ ಮೂಡಿಸಿದರು. ಅಂದಹಾಗೆ ಸಚಿವರ ಊಟದ ಸಂದರ್ಭ ಕಾರು ಚಾಲಕ ಸೇರಿದಂತೆ ನಾಲ್ಕು ಮಂದಿ ಮಾತ್ರ ಇದ್ದರು. ಅವರ ಬೆಂಗಾವಲಿನವರನ್ನೂ ಈ ಸಮಯದಲ್ಲಿ ಸಚಿವರು ದೂರವೇ ಇಟ್ಟಿದ್ದರು.