ಮಂಗಳೂರು, ಜೂ.12 : ನಗರದ ಜೆಪ್ಪು ಪ್ರದೇಶದ ನಂದಿಗುಡ್ಡದಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಮೃತಪಟ್ಟಿದ್ದಾರೆ.ಜೆಪ್ಪು ಸೈಂಟ್ ಜೋಸೆಫ್ ನಗರದ ನಿವಾಸಿ, ಮಾರ್ಟಿನ್ ಜಾನ್ ಮೊಂತೆರೋ (57) ಮೃತ ದುರ್ದೈವಿ. ಮೂಲತಃ ಕಾಸರಗೋಡಿನ ಬಲ್ಲಪದವಿನವರಾದ ಅವರು ಕಳೆದ 30 ವರ್ಷಗಳಿಂದ ನಗರದ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನಲ್ಲಿ ಅಟೆಂಡರ್ ಆಗಿ ದುಡಿಯುತ್ತಿದ್ದರು.
ಮೊನ್ನೆ ರಾತ್ರಿ 8.30ರ ಸುಮಾರಿಗೆ ಮಾರ್ಟಿನ್ ಜಾನ್ ಮೊಂತೆರೋ ಅಂಗಡಿಯಲ್ಲಿ ಸಾಮಗ್ರಿ ಖರೀದಿಸಿ ತನ್ನ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದರು. ನಂದಿಗುಡ್ಡ ಸರ್ಕಲ್ ಬಳಿಯಿದ್ದಾಗ ಅತ್ತಾವರದ ಕಡೆಗೆ ಹೋಗುತ್ತಿದ್ದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂಕ್ರೀಟ್ ರಸ್ತೆಗೆಸೆಯಲ್ಪಟ್ಟು, ತಲೆಗೆ ತೀವ್ರವಾಗಿ ಗಾಯಗೊಂಡವರನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಬೈಕ್ ಸವಾರನ ಅತಿವೇಗ ಹಾಗೂ ಅಜಾಗ್ರತೆಯ ಚಾಲನೆ ಅಪಘಾತಕ್ಕೆ ಕಾರಣವೆನ್ನಲಾಗಿದ್ದು, ಆತ ಘಟನೆಯ ಬಳಿಕ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.