ಮಂಗಳೂರು, ಜೂ. 03 : ಅಬುಧಾಬಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿಯೋರ್ವನಿಂದ ಕಸ್ಟಮ್ಸ್ ಅಧಿಕಾರಿಗಳು 464.800 ಗ್ರಾಂ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಸರಗೋಡು ಮಾಂಗಡ್ ನಿವಾಸಿ ಉಬೈದ್ ಬೇರ್ ಹಸೈನಾರ್ ಎಂದು ಹೇಳಲಾಗಿದೆ.
ಅಬುದಾಬಿಯಿಂದ ಜೆಟ್ ಏರ್ವೆಸ್ ಮೂಲಕ ಆಗಮಿಸಿದ ಉಬೈದ್ ಬೇರ್ ಹಸೈನಾರ್ ನ ಲಗೇಜುಗಳನ್ನು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದ ವೇಳೆ ಆರೋಪಿಯ ಅಕ್ರಮ ಚಿನ್ನ ಸಾಗಾಟ ಪತ್ತೆಯಾಯಿತು. ಚಿನ್ನವನ್ನು ವಿವಿಧ ಗೃಹಬಳಕೆಯ, ಎಲೆಕ್ಟ್ರಾನಿಕ್ ಉತ್ಪನ್ನಗಳ ಬಿಡಿಭಾಗಗಳು, ಉಡುಪುಗಳು ಕಚ್ಚಾ ಸಾಮಗ್ರಿಗಳ ಮಾದರಿಯ ವಸ್ತುಗಳ ರೂಪದಲ್ಲಿ ಪರಿವರ್ತಿಸಿ ಅದಕ್ಕೆ ಬೆಳ್ಳಿಯ ಲೇಪನ ಮಾಡಿ ಸಾಗಿಸುವ ತಂತ್ರಗಾರಿಕೆ ಈಗ ಎಲ್ಲ ಕಡೇ ಕಂಡುಬಂದಿದೆ. ಚಿನ್ನವನ್ನು ಸೂಟ್ಕೇಸ್ನ ಹ್ಯಾಂಡಲ್ಬಕ್ಲ್ ಹೋಲ್ಡರ್ ಹಾಗೂ ರೌಂಡ್ ಬಟನ್ ಮಾದರಿಯ ವಸ್ತುಗಳಾಗಿ ಪರಿವರ್ತಿಸಿ ಅದಕ್ಕೆ ಬೆಳ್ಳಿಯ ಲೇಪನ ಮಾಡಲಾಗಿತ್ತು. ಇದನ್ನು ಸ್ಟ್ರೋಲರ್ ಸೂಟ್ಕೇಸ್ನೊಳಗೆ ಇಟ್ಟು ಸಾಗಿಸಲಾಗುತ್ತಿತ್ತು.
ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ನಡೆಯುತಿದೆ.