ಮಂಗಳೂರು: ಕೋಡ್ಲು ಕ್ರಿಯೆಷನ್ಸ್ರವರ `ಏರೆಗ್ಲಾ ಪನೊಡ್ಚಿ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭ ಶುಕ್ರವಾರ ಮಠದ ಕಣಿ ರಸ್ತೆಯ ಬೊಕ್ಕಪಟ್ಟಣದಲ್ಲಿರುವ ಶ್ರೀ ವೀರಭದ್ರ ಮಹಮ್ಮಾಯ ದೇವಸ್ಥಾನದಲ್ಲಿ ನೆರವೇರಿತು. ಉದ್ಯಮಿ ವಿ. ಮೋಹನ್ ದಾಸ್ ಪೈ ಆರಂಭ ಫಲಕ ತೋರಿಸಿದರು. ಶ್ರೀ ವೀರಭದ್ರ ಮಹಮ್ಮಾಯ ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ ಕಲ್ಬಾವಿ ಕ್ಯಾಮರಾ ಚಾಲನೆ ನೀಡಿದರು.
ತುಳುವಿನಲ್ಲಿ ಈ ಹಿಂದೆ `ರಾತ್ರೆ ಪಗೆಲ್’ ಮತ್ತು `ತುಡರ್’ ಸಿನಿಮಾ ನಿರ್ದೇಶಿಸಿದ್ದೇನೆ. ಈ ಬಾರಿ ಉತ್ತಮ ಕತೆಯ ಜತೆಗೆ ಹಾಸ್ಯ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡುವ ಉದ್ದೇಶದಲ್ಲಿ `ಏರೆಗ್ಲಾ ಪನೊಡ್ಚಿ’ ಹಾಸ್ಯ ಸಿನಿಮಾವನ್ನು ನಿರ್ದೇಶಿಸುತ್ತಿದ್ದೇನೆ ಎಂದು ನಿರ್ದೇಶಕ ಕೋಡ್ಲು ರಾಮಕೃಷ್ಣ ತಿಳಿಸಿದರು. ತನ್ನ ನಿರ್ದೇಶನದ ೨೫ನೇ ಸಿನಿಮಾ ಇದಾಗಿದ್ದು ತುಳುವರೆಲ್ಲರೂ ಪ್ರೋತ್ಸಾಹ ನೀಡುವಂತೆ ಅವರು ವಿನಂತಿಸಿದರು.
ತುಳು ಸಿನಿಮಾರಂಗ ಈಗ ವಿಸ್ತಾರವಾಗಿ ಬೆಳೆಯುತ್ತಿದೆ. ಸಿನಿಮಾ ಬಿಡುಗಡೆಯ ವೇಳೆ ಅಂತರ ಕಾಯ್ದುಕೊಂಡರೆ ನಿರ್ಮಾಪಕರು ಸೇಫ್. ಹೀಗಾಗಿ ನಿರ್ಮಾಪಕರೊಳಗೆ ಒಪ್ಪಂದ ಅಗತ್ಯ ಎಂದು ನಟ ಶಿವಧ್ವಜ್ ತಿಳಿಸಿದರು.
ತುಳುವಿನಲ್ಲಿ ಅನೇಕ ಸಿನಿಮಾಗಳಿಗೆ ನಾಯಕಿಯರಿಗೆ ಸ್ವರ ಡಬ್ಬಿಂಗ್ ನೀಡಿದ್ದೇನೆ. ಈ ಬಾರಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಒದಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ನಟಿ ನೀತೂ ತಿಳಿಸಿದರು.
ಬೆಂಗಳೂರಿನಲ್ಲಿ ಒಂದು ಸಿನಿಮಾ ಬಿಡುಗಡೆಗೊಂಡರೆ ಅದೇ ದಿನ ಮತ್ತೊಂದು ಸಿನಿಮಾಕ್ಕೆ ಮುಹೂರ್ತ ನಡೆಯುತ್ತದೆ. ಅದೇ ಟ್ರೆಂಡ್ ಈಗ ತುಳು ಸಿನಿಮಾರಂಗದಲ್ಲೂ ನಡೆಯುತ್ತಿದೆ. ಇದು ತುಳುಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಎಂದು ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್ ಹರ್ಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ನಿರ್ಮಾಪಕರಾದ ಬಿ.ಎಲ್ ಮುರಳಿ, ಎಸ್.ಕೆ. ಶೆಟ್ಟಿ, ನಿರ್ದೇಶಕರಾದ ಹ.ಸೂ ರಾಜಶೇಖರ್, ವಿಜಯ ಕುಮಾರ್ ಕೊಡಿಯಾಲ್ಬೈಲ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಲ, ಚಿತ್ರ ನಿರ್ಮಾಪಕ ಗಂಗಾಧರ್ ಶೆಟ್ಟಿ ಅಳಕೆ, ನಿರೂಪಕ ನವೀನ್ ಶೆಟ್ಟಿ ಅಳಕೆ, ಕಲಾವಿದರಾದ ಅರವಿಂದ ಬೋಳಾರ್, ಸುಂದರ ರೈ ಮಂದಾರ, ಪ್ರದೀಪ್ ಆಳ್ವ, ಸಚಿನ್ ಶೆಟ್ಟಿ ಕುಂಬಳೆ, ದೇವರಾಜ್ ಆರ್, ಇಳಾ ವಿಟ್ಲ, ಸುರೇಶ್ ಮಂಜೇಶ್ವರ್, ರಕ್ಷಾ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.