ಮಂಗಳೂರು : ಕೇಂದ್ರ ಸರಕಾರದ “ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015’ನ್ನು ವಿರೋಧಿಸಿ ಅಖೀಲ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಹಾಗೂ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಮತ್ತು ಹಲವು ಕಾರ್ಮಿಕ ಸಂಘಟನೆಗಳು ಗುರುವಾರ ಕರೆ ನೀಡಿರುವ ಬಂದ್ ಮಂಗಳೂರಿನಲ್ಲಿ ಯಶಸ್ವಿಯಾಗಿದೆ. ಆದರೆ ದ.ಕ.ಜಿಲ್ಲೆಯ ಹಲವೆಡೆಗಳಲ್ಲಿ ಮಾತ್ರ ವಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ವಾಹನ ಚಾಲಕರ ಪಾಲಿಗೆ “ಮರಣ ಶಾಸನ’ ಎಂದು ಹೇಳಲಾಗುತ್ತಿರುವ ಕೇಂದ್ರ ಸರ್ಕಾರದ “ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015’ನ್ನು ವಿರೋಧಿಸಿ ಇಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದೇಶಾದ್ಯಂತ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೆಎಸ್ಆರ್ಟಿಸಿ, ಎನ್ಇಕೆಆರ್ಟಿಸಿ, ಎನ್ಡಬ್ಲೂಕೆಆರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘಟನೆಗಳು, ಆಟೋ ಚಾಲಕರ ಕೆಲವು ಸಂಘ ಟನೆಗಳು ಬಂದ್ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದರಿಂದ ರಾಜ್ಯಾದ್ಯಂತ ಸಾರಿಗೆ ಬಸ್ಗಳು ಇಂದು ಬೆಳಿಗ್ಗೆ 6 ರಿಂದ ರಸ್ತೆಗೆ ಇಳಿಯಲಿಲ್ಲ.
ಬಂದ್ಗೆ ಬೆಂಬಲ ಸೂಚಿಸಿ ಇಂದು ಮುಂಜಾನೆಯಿಂದಲೇ ಹೆಚ್ಚಿನ ಸಾರಿಗೆ ವಾಹನಗಳ ಸಂಚಾರ ಬಹುತೇಕ ಸ್ತಬ್ಧವಾಗಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ಗಳ ಸಂಚಾರ ಸ್ತಬ್ಧವಾಗಿದೆ. ಆದರೆ ಕೆಲ ಸಿಟಿ ಬಸ್ ಮತ್ತು ಸರ್ವಿಸ್ ಬಸ್ಗಳು ಸಂಚಾರಕ್ಕಿಳಿದಿವೆ. ಮಂಗಳೂರಿನ ಖಾಸಗಿ ಬಸ್ಗಳಿಗೆ ಸಂಬಂಧಿಸಿ ಎಐಟಿಯುಸಿ, ಸಿಐಟಿಯು, ಕಾರ್ಮಿಕ ಪರಿಷತ್ ಮತ್ತು ಎಚ್ಎಂ.ಎಸ್, ಉಡುಪಿಯಲ್ಲಿ ಸಿಐಟಿಯು ಸಂಯೋಜಿತ ಬಸ್ ನೌಕರರ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ. ಬಸ್ ಮಾಲಕರು ತಾವು ಬಂದ್ ಆಚರಿಸುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರಾದರೂ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಹಲವು ಕಡೆಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಇದರಿಂದ ದಿನ ನಿತ್ಯ ಬಸ್ಸ್ ಪ್ರಯಾಣವನ್ನೇ ಅವಲಂಬಿಸಿರುವ ಹಲವಾರು ಮಂದಿ ಪರದಾಡುವಂತಾಯಿತು.
ಆದರೆ, ಲಾರಿಗಳು ಟ್ಯಾಕ್ಸಿಗಳ ಸಂಚಾರಕ್ಕೆ ಯಾವುದೇ ಬಾಧೆ ಉಂಟಾಗಿಲ್ಲ. ಆದರೆ, ಖಾಸಗಿ ಬಸ್ಗಳ ಮಾಲಿಕರು ಬಂದ್ಗೆ ಬೆಂಬಲ ನೀಡಿಲ್ಲ. ಹೀಗಾಗಿ ಖಾಸಗಿ ಬಸ್ಗಳು ಸಂಚರಿಸುವ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ನೆರೆ ರಾಜ್ಯಗಳಿಗೆ ಬಸ್ ಸಂಚಾರ ಎಂದಿನಂತೆ ಇದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ದಿನನಿತ್ಯ ಚಲಿಸುವ 10 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಗಳು ಬುಧವಾರ ಸಂಜೆ ಎಂದಿನಂತೆ ನಿಗದಿತ ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಆದೇ ರೀತಿ ಗುರುವಾರದ ಬುಕ್ಕಿಂಗ್ ಸಹ ಫುಲ್ ಆಗಿದೆ ಎಂದು ಖಾಸಗಿ ಬಸ್ಗಳ ಮಾಲಿಕರ ಒಕ್ಕೂಟ ಸ್ಪಷ್ಟಪಡಿಸಿದೆ.
ಅಗತ್ಯ ಸೇವೆಗಳಿಗೆ ಬಂದ್ನಿಂದ ವಿನಾಯಿತಿ :
ಆಸ್ಪತ್ರೆ, ಔಷಧಿ, ಪೆಟ್ರೋಲ್ ಬಂಕ್, ಹಾಲು, ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳು ಎಂದಿನಂತೆ ಲಭ್ಯವಾಗಿದೆ. ಬಂದ್ನ ಕಾರಣಕ್ಕೆ ಸಿಇಟಿ ಪರೀಕ್ಷೆ ಸೇರಿದಂತೆ ಮಂಗಳೂರು ವಿವಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬಿ.ಎ. 4ನೇ ಸೆಮಿಸ್ಟರ್ ಪರೀಕ್ಷೆಯನ್ನು ಮೇ 12ಕ್ಕೆ, ಬಿಎಸ್ಸಿ 4ನೇ ಸೆಮಿಸ್ಟರ್ ಪರೀಕ್ಷೆಯನ್ನು ಮೇ 6ಕ್ಕೆ, ಬಿಕಾಂ 4ನೇ ಸೆಮಿಸ್ಟರ್ ಪರೀಕ್ಷೆಯನ್ನು ಮೇ 4ಕ್ಕೆ , ಬಿ.ಎ. 6ನೇ ಸೆಮಿಸ್ಟರ್ ಪರೀಕ್ಷೆಯನ್ನು ಮೇ 5ಕ್ಕೆ, ಬಿಬಿಎಂ 3 ನೇ ಸೆಮಿಸ್ಟರ್ ಪರೀಕ್ಷೆಯನ್ನು ಮೇ 8ಕ್ಕೆ ಹಾಗೂ ಬಿಬಿಎಂ 6ನೇ ಸೆಮಿಸ್ಟರ್ ಪರೀಕ್ಷೆಯನ್ನು ಮೇ 2ಕ್ಕೆ ಮುಂದೂಡಲಾಗಿದೆ ಎಂದು ಈಗಾಗಲೇ ವಿ.ವಿ. ಪ್ರಕಟನೆ ನೀಡಿದೆ.
ಶಾಲಾ ಕಾಲೇಜುಗಳಿಗೆ ಈಗಾಗಲೆ ಬೇಸಿಗೆ ರಜೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ನಿರಾಳ. ಆದರೆ ಸರ್ಕಾರಿ ಕಚೇರಿಗಳು, ಖಾಸಗಿ ವಲಯದ ಕಚೇರಿಗಳಿಗೆ ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಸಂಚರಿಸುವವರು ಗುರುವಾರ ಕಷ್ಟ ಎದುರಿಸುತ್ತಿದ್ದು ,ಹಲವರು ರಜೆ ಪಡೆದು ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಕೇಂದ್ರ ಸರಕಾರದ ಮಸೂದೆಯಲ್ಲಿ ಏನಿದೆ :
ಕೇಂದ್ರ ಸರಕಾರದ ಉದ್ದೇಶಿತ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯಲ್ಲಿ ವಾಹನ ಚಾಲಕ ಅಪಘಾತ ಎಸಗಿದ ಪರಿಣಾಮ ಯಾರಾದರೂ ಮೃತಪಟ್ಟರೆ 1ಲಕ್ಷ ರೂ.ದಂಡ, 4 ವರ್ಷ ಜೈಲು ಶಿಕ್ಷೆ, ಅಪಘಾತದಲ್ಲಿ ಮಗು ಮರಣಹೊಂದಿದರೆ 3 ಲಕ್ಷ ರೂ.ದಂಡ, ಏಳು ವರ್ಷ ಸಜೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಮೊದಲ ಬಾರಿಗೆ ಸಂಚಾರ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ, 2ನೆ ಬಾರಿ 10 ಸಾವಿರ ರೂ., 3ನೆ ಬಾರಿ 15 ಸಾವಿರ ರೂ. ದಂಡ ಹಾಗೂ 1 ತಿಂಗಳ ಅವಧಿ ಪರವಾನಗಿ ರದ್ದು, ಕಡ್ಡಾಯ ತರಬೇತಿ ಪಡೆಯಬೇಕೆಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ವಾಹನ ನಡೆಸುವ ವೇಳೆ ಮೊಬೈಲ್ ಬಳಸಿದರೆ ದಂಡ, ಹೆಲ್ಮೆಟ್ ಧರಿಸದಿದ್ದರೆ ದಂಡ, ಸೀಟ್ ಬೆಲ್ಟ್ ಧರಿಸದಿದ್ದರೆ 5 ಸಾವಿರ ರೂ. ದಂಡ, ಮದ್ಯ ಸೇವಿಸಿ ಚಾಲನೆ ಮಾಡಿದರೆ 15 ಸಾವಿರ ರೂ. ದಂಡ, ಪರವಾನಗಿ ರದ್ದು, ಜೈಲು ಶಿಕ್ಷೆ ಸೇರಿದಂತೆ ಚಾಲಕರ ವಿರೋಧಿ ಅಂಶಗಳನ್ನು ಮಸೂದೆಯಲ್ಲಿ ಅಳವಡಿಸಲಾಗಿದೆ ಎಂದು ಆರೋಪಿಸಲಾಗಿದೆ.