ಕುಂದಾಪುರ : ಬೃಹತ್ ಎತ್ತರದ ನೀರಿನ ಟ್ಯಾಂಕಿನಿಂದ ಯುವತಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಗರದ ಸಂಗಂ ಸಮೀಪದಲ್ಲಿ ನಡೆದಿದೆ, ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸ್ಥಳೀಯ ಕೋಟೆಗುಡ್ಡೆ ನಿವಾಸಿ ಬಾಬಣ್ಣ ಎಂಬುವರ ಪುತ್ರಿ ಶುಭಿನಾ(೧೯) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಶುಭಿನಾ ಬಡಕುಟುಂಬದಲ್ಲಿ ವಾಸಿಸುತ್ತಿದ್ದು ತಂದೆ ಹೋಟೆಲ್ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದಾರೆ. ಎಸ್ಎಸ್ಎಲ್ಸಿ ತನಕ ಓದಿರುವ ಶುಭಿನಾ ಕಳೆದ ಒಂದು ವರ್ಷದಿಂದ ಕಣ್ಣಿನ ಕ್ಯಾನ್ಸರ್ನಿಂದ ಬಳಲುತ್ತಿದ್ದಳೆನ್ನಲಾಗಿದೆ. ಆದರೂ ಆಕೆ ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಅತೀ ಬಡಕುಟುಂಬದಲ್ಲಿ ಇದ್ದು ಆರೋಗ್ಯದ ಸಮಸ್ಯೆಯಿಂದಾಗಿ ಮಾನಸಿಕವಾಗಿ ನೊಂದು ಆಕೆ ಸೋಮವಾರ ಸಂಘಂನ ಸ್ಮಶಾನದ ಬಳಿಯಿರುವ ಪುರಸಭೆಯ ವ್ಯಾಪ್ತಿಗೆ ಸೇರಿದ ಸುಮಾರು ನೂರು ಅಡಿಗಿಂತಲೂ ಹೆಚ್ಚು ಎತ್ತರವಿರುವ ಕುಡಿಯುವ ನೀರಿನ ಟ್ಯಾಂಕಿಗೆ ಅಳವಡಿಸಲಾದ ಏಣಿಯ ಸಹಾಯದಿಂದ ಮೇಲಕ್ಕೆ ಹೋಗಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ರಾತ್ರಿ ಸುಮಾರು ಎಂಟುಗಂಟೆಯಾಗಿದ್ದು, ಆ ಸಂದರ್ಭ ವಿದ್ಯುತ್ ಸ್ಥಗಿತಗೊಂಡಿತ್ತು.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ ಮೊದಲಾದವರು ಆಗಮಿಸಿ ಸ್ಥಳ ಮಹಜರು ನಡೆಸಿದ್ದಾರೆ. ಮೃತದೇಹವನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರತೆಯಿಲ್ಲದ ಏಣಿ: ಅಪಾಯಕಾರಿ ರೀತಿಯ ಎತ್ತರದಲ್ಲಿರುವ ಈ ಬೃಹತ್ ನೀರಿನ ಟ್ಯಾಂಕಿಗೆ ಅಳವಡಿಸಲಾದ ಕಬ್ಬಿಣದ ಏಣಿಯನ್ನು ಯಾರೂ ಬೇಕಾದರೂ ಏರುವಂತಿದ್ದು, ಯಾವುದೇ ಗೇಟ್ ಅಳವಡಿಸದೇ ಇರುವುದರಿಂದ ಈ ರೀತಿಯ ಆತ್ಮಹತ್ಯೆ ನಡೆಸಲು ಸಾಧ್ಯವಾಗಿದೆ. ಕನಿಷ್ಟ ಪಕ್ಷ ಏಣಿಯ ಬುಡದಲ್ಲಾದರೂ ಗೇಟ್ ಅಳವಡಿಸಿ ಬೀಗ ಹಾಕಬೇಕು ಇಲ್ಲದಿದ್ದರೆ ಇಂತಹಾ ಅನಾಹುತಗಳು ಇನ್ನಷ್ಟು ನಡೆಯುವ ಸಾಧ್ಯತೆ ಇದೆ ಎಂಬುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.