ಮಂಗಳೂರು,ಎ.17: ಕರಾವಳಿಯ ಮಂಗಳೂರು ಮೂಲದ ಹಿಂದೂ ಸ್ಥಾನೀ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಉಪೇಂದ್ರ ಭಟ್ ಇದೇ ಎ22 ಮತ್ತು 23 ರಂದು ಪುಣೆಯಲ್ಲಿ ಗೀತ ರಾಮಾಯಣ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಗ.ದಿ. ಮಾಡ್ಗುಲ್ಕರ್ ಮತ್ತು ಸ್ವರಾನಂದ ಪುಣೆ ವತಿಯಿಂದ ಗೀತರಾಮಾಯಣ ಗಾಯನ 60ನೇ ವರ್ಷಾಚರಣೆಯ ರಾಷ್ಟ್ರೀಯ ಮಹತ್ವದ ಈ ಸಂಭ್ರಮ ಎ20 ರಿಂದ 24 ರವರೆಗೆ ಪುಣೆಯ ಗಣೇಶ್ ಕಲಾ ಕ್ರೀಡಾ ಅಡಿಟೋರಿಯಂನಲ್ಲಿ ನಡೆಯಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ,ಆಯರ್ವೇದಾಚಾರ್ಯ ಬಾಲಾಜಿ ತಾಂಬೆ ಮತ್ತಿತರ ಗಣ್ಯರು,ರವೀಂದ್ರ ಸಾಟೆ, ವಿಭಾವರಿ ಜೋಷಿ ಮೊದಲಾದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪಂಡಿತ್ ಭೀಮ ಸೇನ ಜೋಷಿಯವರ ಶಿಷ್ಯರಾಗಿರುವ ಉಪೇಂದ್ರ ಭಟ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ರಾಜ್ಯದ ಏಕೈಕ ಕಲಾವಿದ. ಉಪೇಂದ್ರ ಭಟ್ ಈ ಕಾರ್ಯಕ್ರಮದಲ್ಲಿ ಕನ್ನಡ, ಕೊಂಕಣಿ ಮಾತ್ರವಲ್ಲ ಮರಾಠಿಯಲ್ಲಿ ಗೀತ ರಾಮಾಯಣವನ್ನು ಪ್ರಸ್ತುತ ಪಡಿಸುವ ಅವಕಾಶ ಪಡೆದಿರುವ ಏಕೈಕ ಮಹಾನ್ ಕಲಾವಿದರಾಗಿದ್ದಾರೆ. ಎ22 ದು ಕನ್ನಡ ಹಾಗೂ ಕೊಂಕಣಿಯಲ್ಲಿ ಹಾಗೂ ಎ 23 ರಂದು ಮರಾಠಿಯಲ್ಲಿ ಅವರು ಗೀತ ರಾಮಾಯಣ ಪ್ರಸ್ತುತ ಪಡಿಸಲಿದ್ದಾರೆ.
ಖ್ಯಾತ ಮರಾಠಿ ಕವಿ ಗಜಾನನ ದಿಗಂಬರ ಮಾಡ್ಗುಲ್ಕರ್ 1955 ರಲ್ಲಿ ರಚಿಸಿದ್ದ 56 ಗೀತೆಗಳ ಗೀತಾ ರಾಮಾಯಣ ಖ್ಯಾತ ಗಾಯಕ ಸುಧೀರ್ ಫಡ್ಕೆ ಹಾಡಿದ್ದು ಮಹಾರಾಷ್ಟ್ರ ಸಹಿತ ವಿಶ್ವದಾದ್ಯಂತ ನಂತರದ ದಿನಗಳಲ್ಲಿ ಜನಪ್ರಿಯವಾಗಿದೆ. 1980ರಲ್ಲಿ ಈ ಗೀತ ರಾಮಾಯಣದ 25 ನೇ ವರ್ಷಾಚರಣೆ ಸುಧೀರ್ ಫಡ್ಕೆ ಅವರಿಂದ ಪುಣೆಯಲ್ಲಿ ನಡೆದಿತ್ತು. ಅದಾಗಲೇ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದ್ದ ಗೀತರಾಮಾಯಣವನ್ನು ಪಂಡಿತ್ ಉಪೇಂದ್ರ ಭಟ್ ಕನ್ನಡದಲ್ಲಿ ಹಾಡುವ ಅವಕಾಶ ಪಡೆದಿದ್ದರು. ಈ ಸಮಾರಂಭದಲ್ಲಿ ಸ್ವತ: ಭೀಮ ಸೇನ ಜೋಷಿಯವರು ಅಧ್ಯಕ್ಷತೆ ವಹಿಸಿದ್ದು ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.