ಮಂಗಳೂರು,ಎ.5 : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” ಎಂಬ ಕಾರ್ಯಕ್ರಮದ 10 ನೇ ವಾರದ ಸ್ವಚ್ಚತಾ ಅಭಿಯಾನವನ್ನು ಭಾನುವಾರ ಕದ್ರಿ ಹಿಲ್ಸ್ ಸರ್ಕೀಟ್ ಹೌಸ್ ಸುತ್ತಮುತ್ತ ಪರಿಸರದಲ್ಲಿ ನಡೆಯಿತು. ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿಯವರ ಉಪಸ್ಥಿತಿಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಖಾತೆಯ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ ಕಟೀಲು ಇವರು ಮುಖ್ಯ ಅತಿಥಿಗಳಾಗಿದ್ದರು. ಜೆ ಆರ್ ಲೋಬೊ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಯೋಗೀಶ ಭಟ್, ಶ್ರೀ ಜೆ ಕೃಷ್ಣ ಪಾಲೆಮಾರ್, ಎಂಆರ್ ಪಿ ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎಚ್ ಕುಮಾರ ಮತ್ತಿತ್ತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಗಳಾದರು.
ಎಂಆರ್ಪಿಲ್ ನೌಕರರು, ವಿವಿ ಕ್ರಿಕೇಟ್ ಅಸೋಸಿಯೇಶನ್, ಅಮಲ ಭಾರತ ತಂಡ , ಚಾರ್ಟರ್ಡ್ ಅಕೌಂಟೆಂಟ ಅಸೋಸಿಯೇಶನ್ ಹಾಗೂ ಐಸಿರಿ ಕಲಾತಂಡ ಇವರೆಲ್ಲರ ಸಹಯೋಗದಲ್ಲಿ ರಾಮಕೃಷ್ಣ ಮಿಷನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.
ಸರ್ಕೀಟ್ ಹೌಸ್ ಎದುರಿಗೆ ಅಯೋಜಿತವಾಗಿದ ಸಭಾಕಾರ್ಯಕ್ರಮದಲ್ಲಿ “ಸ್ವಚ್ಚ ಭಾರತ ಅಭಿಯಾನ ಕೇವಲ ಸರಕಾರಿ ಕಾರ್ಯಕ್ರಮವಾಗಿ ಉಳಿಯದೇ ಜನಾಂದೋಲವಾಗಿ ರೂಪುಗೊಂಡಿರುವುದು ಬಹಳ ಆನಂದದ ಸಂಗತಿ. ಮಂಗಳೂರಿಗೆ ತನ್ನದೇ ಆದ ವಿಶೇಷತೆಯಿದೆ. ಇಲ್ಲಿನ ಜನತೆ ಮಾಡುವುದನ್ನು ಬೆಂಗಳೂರು ಜನತೆ ಎರಡು ಮೂರು ದಿನದ ನಂತರ ಯೋಚಿಸುತ್ತದೆ ಹಾಗೂ ಮಾಡುತ್ತದೆ . ಒಂದು ತಿಂಗಳ ನಂತರ ದೇಶ ಅದನ್ನು ಮಾಡುತ್ತದೆ ” ಎಂದು ಸಚಿವರು ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಕಲರನ್ನು ಸ್ವಾಗತಿಸಿದರು. ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ನೀಡಿದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕ ರಾಮಪ್ರಸಾದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
ಸ್ವಚ್ಚತಾ ಕಾರ್ಯಕ್ರಮ :
1) ಕದ್ರಿ ಪೋಲಿಸ್ ಠಾಣೆಯ ಎದುರಿಗಿರುವ ನಿರುಪಯೋಗಿ ಬಸ್ ತಂಗುದಾಣವನ್ನು ನವೀಕರಿಸಲಾಯಿತು. ಅದರಲ್ಲಿದ್ದ ಹೊಂಡವನ್ನು ಸಮ ಮಾಡಿ, ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಯಿತು ಅಲ್ಲದೇ ಎದುರಿಗೆ ರೇಲಿಂಗ್ ಅಳವಡಿಸಲಾಗಿದೆ. ವಿನೂತನ ಪ್ರಯೋಗವಾಗಿ ಶ್ರೇಷ್ಠ ಮಟ್ಟದ ಐಸಿರಿ ಕಲಾತಂಡದವರಿಂದ ಈ ತಂಗುದಾಣವನ್ನು ಹಚ್ಚಹಸಿರು ಮರದ ರೂಪದಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ.
2) ಪೋಲಿಸ್ ಠಾಣೆಯ ಪಕ್ಕದಲ್ಲಿದ್ದ ನಿರುಪಯುಕ್ತ ಜಾಗೆಯಲ್ಲಿದ್ದ ಅಪಘಾತಕ್ಕೊಳಗಾದ ವಾನಗಳನ್ನು ತೆರವುಗೊಳಿಸಿ, ಕಲ್ಲಮಣ್ಣು ಗಿಡಗಂಟಿಗಳನ್ನು ತೆಗೆದು ಶುಚಿಗೊಳಿಸಿ ಸಾರ್ವಜನಿಕ ಪಾರ್ಕಿಂಗ್ ಹಾಗೂ ಉದ್ಯಾನವನ್ನಾಗಿ ರೂಪಿಸಲಾಗುತ್ತಿದೆ.
3) ಸರ್ಕೀಟ್ ಹೌಸ್ ಆವರಣದಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡ ರಥಬೀದಿ ಸರಕಾರಿ ಕಾಲೇಜಿನ ವಿದ್ಯಾರ್ಥಿಳು ಅಲ್ಲಲ್ಲಿ ಬಿಸಾಡಿದ್ದ ಸುಮಾರು ಸಾವಿರಕ್ಕೂ ಅಧಿಕ ಬಾಟಲಗಳನ್ನು ಒಟ್ಟುಮಾಡಿ ಸಾರ್ವಜನಿಕರು, ಜನಪ್ರತಿನಿಧಿಗಳು ನಿಬ್ಬೆರಗಾಗುವಂತೆ ಮಾಡಿದ್ದು ವಿಶೇಷವಾಗಿತ್ತು.
4) ಸ್ವಯಂ ಸೇವಕರು ಕದ್ರ್ರಿ ಹೀಲ್ಸ್ ವೃತ್ತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗುಂಪುಗಳಾಗಿ ತೆರಳಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡರು.
5) ರಾಮಕೃಷ್ಣ ಮಿಷನ್ ನ ಬಾಲಕಾಶ್ರಾಮದ ವಿದ್ಯಾರ್ಥಿಗಳು ಮನೆಗೆ ತೆರಳಿ ಸ್ವಚ್ಚತಾ ಜಾಗೃತಿ ಮೂಡಿಸುವ ಕರಪತ್ರ ಹಂಚಿದರು.
ಸುಮಾರು 300 ಜನ ಸ್ವಚ್ಚತಾ ಕಾರ್ಯಕರ್ತರು ಈ 10ನೇ ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.