ಬಂಟ್ವಾಳ,ಎಪ್ರಿಲ್.04: ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲೆ ಟ್ಯಾಂಕರ್ ಹಾಗೂ ಚಾವರ್ಲೆಟ್ ಕಾರಿನ ಮಧ್ಯೆ ಭೀಕರ ಅಪಘಾತ ನಡೆದು ಒಂದೇ ಕುಟುಂಬಕ್ಕೆ ಸೇರಿದ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಪಿತ್ತಾಲೆಗುಡ್ಡೆ ನಿವಾಸಿ ಅಬ್ದುಲ್ಲತೀಫ್ ಎಂಬವರ ಪುತ್ರರಾದ ರಿಝ್ವಾನ್ (24) ಹಾಗೂ ರಾಝಿಕ್ (14), ನಾಸೀರ್ ಎಂಬವರ ಪುತ್ರ ಖಾದರ್(14) ಎಂದು ಗುರುತಿಸಲಾಗಿದೆ.
ಪಾಣೆಮಂಗಳೂರು ಕಡೆಯಿಂದ ಬಿ.ಸಿ.ರೋಡಿನ ಕಡೆಗೆ ಬರುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಟ್ಯಂಕರ್ಗೆ ಕಾರು ಡಿಕ್ಕಿಯಾಗಿದೆ. ಕಾರು ಅತೀವೇಗದಲ್ಲಿ ಬರುತ್ತಿದ್ದು ಮೋಟಾರ್ ಬೈಕೊಂದನ್ನು ಹಿಂದಿಕ್ಕುವ ಭರದಲ್ಲಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯ ಒಳಭಾಗಕ್ಕೆ ನುಗ್ಗಿದ್ದ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಕಾರಿನೊಳಗಿದ್ದ ಮೂರು ಮಂದಿಯೂ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದು ಇತರ ವಾಹನಗಳ ಪ್ರಾಯಾಣಿಕರ ನೆರವಿನಿಂದ ಅವರನ್ನು ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ರಕ್ತದ ಕೋಡಿ ಹರಿದಿದ್ದು ಕಾರಿನ ಬಿಡಿಭಾಗಗಳು ಪುಡಿಪುಡಿಯಾಗಿ ಬಿದ್ದಿದ್ದವು. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥ ಉಂಟಾಗಿ ಹಳೆ ಸೇತುವೆಯ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಘಟನೆಯ ಸುದ್ದಿ ತಿಳಿಯುತ್ತದಂತೆಯೇ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಪೊಲೀಸರು ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.