ಕುಂದಾಪುರ: ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕರೆಯ ಮೇರೆಗೆ ಕುಂದಾಪುರ ತಾಲೂಕು ಆಶಾ ಕಾರ್ಯಕರ್ತೆಯರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುಂದಾಪುರ ತಾಲೂಕು ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನಾ ಕಾರ್ಯಕ್ರಮ ನಡೆಯಿತು.
ಸಿಐಟಿಯಿ ಕುಂದಾಪುರ ತಾಲೂಕು ಅಧ್ಯಕ್ಷ ಹೆಚ್. ನರಸಿಂಹ ಇವರು ಆಶಾ ಕಾರ್ಯಕರ್ತೆಯರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಕಾರ್ಯಕರ್ತೆಯರೆಂದು ಪರಿಗಣಿಸಿ ಖಾಯಂಗೊಳಿಸಬೇಕು, ಕನಿಷ್ಟ ವೇತನ ಮಾಸಿಕ ೧೫ ಸಾವರಿ ನಿಗಧಿಪಡಿಸಬೇಕು, ಸಾಮಾಜಿಕ ಭದ್ರತೆಯಡಿಯಲ್ಲಿ ಪಿಂಚಣಿ ಸೌಲಭ್ಯ ಒದಗಿಸಬೇಕು, ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ, ಗುರುತಿನ ಚೀಟಿ, ಬಸ್ಸು ಪ್ರಯಾಣ ರಿಯಾಯಿತಿ ಸೌಲಭ್ಯ, ಬಿಪಿಎಲ್ ಪಡಿತರ ಚೀಟಿ, ಉಚಿತ ಮೊಬೈಲ್ ಫೋನ್, ಹೆರಿಗೆ ರಜೆ, ಗ್ರಾಚ್ಯುಟಿ ಸೌಲಭ್ಯ ನೀಡಬೇಕು. ಆಸಾ ಕಾರ್ಯಕರ್ತೆಯರಿಗೆ ನರ್ಸಿಂಗ್ ಕಾಲೇಜಿಗಳಲ್ಲಿ ತರಬೇತಿಗೆ ಶೇ.೧೦ ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ಕುಂದಾಪುರದ ತಹಸೀಲ್ದಾರರು ಮನವಿ ಸ್ವೀಕರಿಸಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಅಧ್ಯಕ್ಷೆ ವಸಂತಿ ಶೆಟ್ಟಿ, ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ್ ಕೋಣಿ, ನಾಗರತ್ನ ನಾಡಾ, ವಿದ್ಯಾರ್ಥಿ ಮುಖಂಡ ಶ್ರೀಕಾತ ಹೆಮ್ಮಾಡಿ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರ ಸಂಘದ ಕುಂದಾಪುರ ತಾಲೂಕು ಕಾರ್ಯದರ್ಶಿ ಶೀಲಾವತಿ ಸ್ವಾಗತಿಸಿದರು.