ಉಡುಪಿ: ಅನ್ಯಧರ್ಮದವರು ಮತಾಂತರ ನಡೆಸುವುದು ಮುಂದುವರೆಸುವುದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲರೂ ಒಗ್ಗೂಡುವ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪಿಸಬೇಕು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದರು.
ವಿಶ್ವ ಹಿಂದು ಪರಿಷತ್ ನ ವಜ್ರಮಹೋತ್ಸವದ ಅಂಗವಾಗಿ ಉಡುಪಿ ಕುಂಜಿಬೆಟ್ಟು ಎಂಜಿಎಂ ಕ್ರೀಡಾಂಗಣದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಭಯೋತ್ಪಾದನೆ, ಮತಾಂತರ ನಿಲ್ಲಬೇಕು. ಸರ್ಕಾರ ಕೇವಲ ಮರುಮತಾಂತರವನ್ನು ಪ್ರಶ್ನಿಸುತ್ತದೆ. ಆದರೇ ಮತಾಂತರದ ಕಡೆ ನಿಗಾ ವಹಿಸುತ್ತಿಲ್ಲ. ಸರ್ಕಾರ ಭೇದಬಾವ ಮಾಡದೆ ಅಲ್ಪಸಂಖ್ಯಾತರಿಗೆ ನೀಡುವ ಸೌಲಭ್ಯವನ್ನು ಬಹುಸಂಖ್ಯಾತರಿಗೂ ನೀಡಬೇಕು. ಒಟ್ಟಾರೆ ಸಮಾಜದಲ್ಲಿ ಹಿಂದೂ ಧರ್ಮಕ್ಕೆ ಅಪಮಾನವಾದ ಅಸ್ಪೃಶ್ಯತೆ, ಅಶಾಂತಿಗೆ ಕಾರಣವಾಗಿರುವ ಮತಾಂತರ, ಗೋಹತ್ಯೆ, ಭಯೋತ್ಪಾದನೆ ರಾಷ್ಟ್ರದಿಂದ ತೊಲಗಿಸುವ ಸಂಕಲ್ಪ ಹಿಂದೂಗಳು ಮಾಡಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ತೊಗಡಿಯಾ ಬದಲಿ ದಿಕ್ಸೂಜಿ ಭಾಷಣಕಾರ ನಾಗ್ಪುರ ಜಿಲ್ಲೆ ವಿಶ್ವಹಿಂದೂ ಪರಿಷತ್ತಿನ ವಿಶ್ವವಿಭಾಗೀಯ ಸಂಚಾಲಕ ಪ್ರಶಾಂತ್ ಹರ್ ತಾಲ್ಕರ್ ಮಾತನಾಡಿ, ಹಳೆ ಕಾಲದ ರಾಜನೀತಿಯಿಂದ ಹಿಂದೂ ಧರ್ಮದ ಶ್ರದ್ಧೆ ನಿಷ್ಟೆಯನ್ನು ನಿಲ್ಲಿಸಲಾಗುವುದಿಲ್ಲ. ಧರ್ಮದ ಪಾಲನೆ ಮಾಡಿದರೆ ಧರ್ಮ ನಿಮ್ಮನ್ನು ರಕ್ಷಣೆ ಮಾಡುತ್ತದೆ. ಸಮಾಜದಲ್ಲಿ ಒಂದು ಒಳ್ಳೆಯ ಹಿಂದೂ ಮನೆ ನಿರ್ಮಾಣವಾಗಬೇಕು ಆಗ ಲವ್ ಜಿಹಾದ್ ಭಯವಿರುವುದಿಲ್ಲ ಎಂದರು.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ, ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಮೋಹನ್ ಆಳ್ವಾ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ ಜಿ ಮತ್ತಿತರರು ಉಪಸ್ಥಿತರಿದ್ದರು.
ಸಮಾವೇಶವನ್ನು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ದೀಪ ಬೆಳಗಿಸಿ ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮನಕ್ಕೂ ಮೊದಲು ಜೋಡುಕಟ್ಟೆಯಿಂದ ನೂರಾರು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ಬೃಹತ್ ಶೋಭಾಯಾತ್ರೆ ಮೈದಾನದವರೆಗೆ ನಡೆಯಿತು.
ಕಾರ್ಯಕ್ರಮಕ್ಕೆ ಲಕ್ಷ ಮಂದಿಯ ನಿರೀಕ್ಷೆ ಹುಸಿಯಾಗಿದ್ದು ಕೇವಲ 20ರಿಂದ 22ಸಾವಿರ ಮಂದಿ ನೆರೆದಿದ್ದರು. ಪೋಲಿಸ್ ಇಲಾಖೆ 5.15ರವರೆಗೆ ನೀಡಿದ್ದರು ಅರ್ಧಗಂಟೆ ಹೆಚ್ಚಿಗೆ ಸಮಾವೇಶ ತೆಗೆದುಕೊಂಡದ್ದು ಸಂಘಟಕರು ಪೊಲೀಸ್ ಇಲಾಖೆಗೆ ಸವಾಲು ಎಸೆದಂತಿತ್ತು. ಒಟ್ಟಿನಲ್ಲಿ ಸಮಾವೇಶ ಶಾಂತಿಯುತವಾಗಿ ನಡೆಯಿತು.