ಕನ್ನಡ ವಾರ್ತೆಗಳು

ನೈತಿಕ ಪೊಲೀಸ್‌ಗಿರಿಗೆ ಕಾನೂನಿನಲ್ಲಿ ಸಮರ್ಥನೆ ಇಲ್ಲ: ಎಂ.ಸಿ. ನಾಣಯ್ಯ

Pinterest LinkedIn Tumblr

Zp_meeting_photo_1

ಮಂಗಳೂರು ಮಾರ್ಚ್.05 ನೈತಿಕ ಪೊಲೀಸ್‌ಗಿರಿಯ ಹಕ್ಕು ಯಾರಿಗೂ ಇಲ್ಲ, ಕಾನೂನಿನಲ್ಲೂ ಇದಕ್ಕೆ ಸಮರ್ಥನೆಯೂ ಇಲ್ಲ ಎಂದು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಅಧ್ಯಯನ ಕುರಿತ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಎಂ.ಸಿ.ನಾಣಯ್ಯ ಹೇಳಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಜತೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾಗಿರುವ ತಂಡ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು, ಮಕ್ಕಳು ಸೇರಿದಂತೆ ಯಾರ ಮೇಲೂ ಹಲ್ಲೆ ನಡೆಸುವ, ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ ಬಗ್ಗೆ ಬಹಳಷ್ಟು ದೂರು ಕೇಳಿ ಬರುತ್ತಿದೆ. ಉಳಿದಂತೆ ಮರ್ಯಾದ ಹತ್ಯೆ, ಭ್ರೂಣ ಹತ್ಯೆಯಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮೇಲ್ಮಟ್ಟದಲ್ಲಿ ಗೋಚರಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ವಿಧಾನ ಪರಿಷತ್ ಸದಸ್ಯೆಯೂ ಆದ, ಸಮಿತಿ ಸದಸ್ಯೆ ಮೋಟಮ್ಮ ಮಾತನಾಡಿ, ಬುದ್ಧಿವಂತರ, ಸಾಕ್ಷರರ ಜಿಲ್ಲೆಯಲ್ಲಿ ಮಹಿಳೆಯರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿಲ್ಲ. ಸಭೆಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗಿದ್ದರೆ ಸಮಿತಿಗೆ ಲಿಖಿತವಾಗಿ ತಿಳಿಸುವ ಮೂಲಕವೂ ಸಲಹೆ ಸೂಚನೆಗಳನ್ನು ನೀಡಬಹುದು ಎಂದರು.

Zp_meeting_photo_5 Zp_meeting_photo_2 Zp_meeting_photo_3 Zp_meeting_photo_4

ಅತ್ಯಾಚಾರಿಗೆ ತಕ್ಷಣ ಜಾಮೀನು ಸಿಗುವಂತಾಗಬಾರದು. ಪ್ರಕರಣ ರಾಜಿಯ ಮೂಲಕ ಬಗೆಹರಿಸಲು ಅವಕಾಶ ನೀಡಬಾರದು. ಅತ್ಯಾಚಾರಕ್ಕೊಳಗಾದವರ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವ ಸಂದರ್ಭ ಅವರ ಹೆಸರು ಮಾತ್ರವಲ್ಲದೆ, ಅವರ ವಿಳಾಸವನ್ನೂ ಗೌಪ್ಯವಾಗಿಡಬೇಕು ಎಂಬಂತಹ ಹಲವಾರು ಸಲಹೆ, ಸೂಚನೆಗಳು ಹಾಗೂ ಆತಂಕಗಳು ಸಭೆಯಲ್ಲಿ ವ್ಯಕ್ತವಾಯಿತು.

ಹೆಣ್ಮಕ್ಕಳ ಸಂಖ್ಯೆ ಕ್ಷೀಣ: ಜಿಲ್ಲೆಯಲ್ಲಿ ಬಾಲ್ಯವಿವಾಹ ಅಪರೂಪವಾಗಿದ್ದು, ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಸೂಚ್ಯಾಂಕ ಉತ್ತಮ ಸ್ಥಿತಿಯಲ್ಲಿದೆ. ಆದರೆ, 1980ರಲ್ಲಿ 1000:1060ರ ಅನುಪಾತದಲ್ಲಿದ್ದ ಮಹಿಳೆಯರ ಸಂಖ್ಯೆ ಇದೀಗ 1000:1020ಕ್ಕೆ ಇಳಿಕೆಯಾಗಿರುವ ಬಗ್ಗೆ ಆತಂಕವಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

ಕಾನೂನಿನ ದ್ವಂದ್ವ: ಅತ್ಯಾಚಾರ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೊ ಕಾಯಿದೆ ಮತ್ತು ಐಪಿಸಿ ಸೆಕ್ಷನ್‌ನಡಿ ದ್ವಂದ್ವವಿದೆ. ಐಪಿಸಿ ಸೆಕ್ಷನ್‌ನಡಿ 15ರಿಂದ 18 ವರ್ಷದೊಳಗಿನ ವಿವಾಹಿತ ಮಹಿಳೆಗೆ ಗಂಡನಿಂದ ದೌರ್ಜನ್ಯವನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಪೋಕ್ಸೋದಡಿ ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ. ಇದರಿಂದ ಹಲವಾರು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವ ಸಂದರ್ಭ ಪೊಲೀಸರಿಗೆ ಅಡಚಣೆಯಾಗುತ್ತಿದೆ. ಈ ಅಂಶವನ್ನು ಸಮಿತಿ ಸರಕಾರದ ಗಮನಕ್ಕೆ ತರಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಮನವಿ ಮಾಡಿದರು.

Zp_meeting_photo_6 Zp_meeting_photo_7 Zp_meeting_photo_8

ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ ಒಟ್ಟು 14 ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2013ರಲ್ಲಿ 12 ಮತ್ತು 2014ರಲ್ಲಿ ಎರಡು ಪ್ರಕರಣಗಳಾಗಿದ್ದು, ಈ ವರ್ಷ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್. ಮುರುಗನ್ ಮಾತನಾಡಿ, ನಗರದಲ್ಲಿ 2013ರಲ್ಲಿ 18 ಅತ್ಯಾಚಾರ ಪ್ರಕರಣಗಳು, 2014ರಲ್ಲಿ 27 ಹಾಗೂ 2015ರಲ್ಲಿ 2 ಪ್ರಕರಣ ದಾಖಲಾಗಿವೆ ಎಂದರು.

ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಳಂಬ ಧೋರಣೆ ಅನುಸರಿಸದೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ನಿರ್ಲಕ್ಷ ತೋರಿಸುವ ಪೊಲೀಸರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೂಡಾ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಸಮಿತಿ ಸದಸ್ಯರಾದ ರಾಣಿ ಸತೀಶ್, ವಿಮಲಾ ಕೆ.ಎಸ್., ಲೀಲಾ ಸಂಪಿಗೆ, ಪ್ರಭಾ ಎನ್., ಜೀಜಾ ಹರಿಸಿಂಗ್, ಕೃಪಾ ಅಮರ್ ಆಳ್ವ, ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪತಿ, ಜಿಲ್ಲಾ ಪಂಚಾಯಿತಿ ನೂತನ ಸಿಇಒ ಶ್ರೀವಿದ್ಯಾ ಉಪಸ್ಥಿತರಿದ್ದರು.

Write A Comment