ಮೂಲ್ಕಿ,ಫೆ.24 : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮೂಲ್ಕಿ ಕಾರ್ನಾಡು ಬೈಪಾಸ್ ಬಳಿ ಸೋಮವಾರ ಕಾರೊಂದು ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಹಾಗೂ ಕಾರು ಚಾಲಕ ಸಹಿತ ಪ್ರಯಾಣಿಕರೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಲ್ಲಿ ರಿಕ್ಷಾ ಚಾಲಕ ಹಳೆಯಂಗಡಿ ಪಡುಪಣಂಬೂರು ನಿವಾಸಿ ರತ್ನವರ್ಮ ಜೈನ್ ಹಾಗೂ ಪ್ರಯಾಣಿಕ ವಿಶ್ವನಾಥ ದೇವಾಡಿಗ ಮತ್ತು ಕಾರು ಚಾಲಕ ಕಾರ್ನಾಡು ನಿವಾಸಿ ತಮೀಮ್ ತೀವ್ರ ಗಾಯಗೊಂಡಿದ್ದಾರೆ.
ಹಳೆಯಂಗಡಿಯಿಂದ ಮೂಲ್ಕಿಯತ್ತ ಸಂಚರಿಸುತ್ತಿದ್ದ ರಿಕ್ಷಾ ಕಾರ್ನಾಡು ಬೈಪಾಸ್ನಿಂದ ಕಾರ್ನಾಡು ಪೇಟೆಗೆ ತಿರುವು ಪಡೆಯುತ್ತಿದ್ದಾಗ ಸ್ವ್ವಿಫ್ಟ್ ಕಾರು ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ರಿಕ್ಷಾವು ರಸ್ತೆಯ ಬಲ ಬದಿಯಲ್ಲಿದ್ದ ಡಿವೈಡರ್ ಮೇಲೆ ಮುಗುಚಿ ಬಿದ್ದು ಸಂಪೂರ್ಣವಾಗಿ ಜಖಂಗೊಂಡಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಮುಕ್ಕದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸುರತ್ಕಲ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಕೊಂಡು ತನಿಖೆ ಮುಂದುವರಿಸಿದ್ದಾರೆ.
_ನರೇಂದ್ರ ಕೆರೆಕಾಡು