ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು: ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ನಿಟ್ಟೆ ವಿವಿ ಸಹಯೋಗದೊಂದಿಗೆ ‘ನಿಟ್ಟೆ ಮಂಗಳೂರು ಹಾಫ್ ಮ್ಯಾರಥಾನ್ ಹಾಗೂ 10ಕೆ ರನ್’ ರವಿವಾರ ಮುಂಜಾನೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.
ಯುವ ಸಮುದಾಯವನ್ನು ಕ್ರೀಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಹಲವು ವಿಭಾಗದಲ್ಲಿ ಆಯೋಜಿಸಲಾಗಿರುವ ಈ ಹಾಫ್ ಮ್ಯಾರಥಾನ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕಾಲೇಜಿನ 4150, ಪ್ರೌಢಶಾಲಾ ವಿಭಾಗದ 4500, ಹಿರಿಯ ಪ್ರಾಥಮಿಕ ಶಾಲೆಯ 3500 ಹಾಗೂ ‘ನಮ ಬಲಿಪುಗ’ ವಿಭಾಗದಲ್ಲಿ 2500 ಮಂದಿ ಸಾರ್ವಜನಿಕರು ಸೇರಿದಂತೆ 14,650 ಜನರು ಮ್ಯಾರಥಾನ್ನಲ್ಲಿ ಭಾಗವಹಿಸಲು ಮೊದಲೇ ನೋಂದಣಿ ಮಾಡಿಕೊಂಡಿದ್ದರು.
ಇದೀಗ ಕಾರ್ಯಕ್ರಮದ ದಿನವಾದ ಇಂದು ಸಾವಿರಾರು ಮಂದಿ ನೋಂದಣಿ ಮಾಡುವ ಮೂಲಕ ಒಟ್ಟು ಸುಮಾರು 20 ಸಾವಿರ ಮಂದಿ ಈ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದಾರೆ. ವಿವಿಧ ವಿಭಾಗಗಳ ವಿಜೇತರಿಗೆ ಸುಮಾರು 5,71,000 ರೂ. ಬಹುಮಾನವನ್ನು ನೀಡಲಾಗುತ್ತಿದೆ ಎಂದು ದ.ಕ. ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ್ ಭಂಡಾರಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸುನೀಲ್ ಕುಮಾರ್ ಶೆಟ್ಟಿ ಹಾಗೂ ಅಶ್ವಿನಿ ನಾಚಪ್ಪ ಅವರು ಈ ಕಾರ್ಯಕ್ರಮದ ರಾಯಭಾರಿಗಳಾಗಿ ಭಾಗವಹಿಸಿದ್ದರು. ಕೆಎಎಎ ಬೆಂಗಳೂರು ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಮಹಾಬಲ ಮಾರ್ಲ, ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಅದಿಲ್ ಸುಮಾರಿವಾಲ, ಮೊಯ್ದೀನ್ ಬಾವ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಐಜಿಪಿ ಅಮೃತ್ ಪೌಲ್, ಲೈಫ್ ಈಸ್ ಕಾಲಿಂಗ್’ನ ಪಿ.ಬಿ.ಮಿತ್ರ, ಅರುಣ್ ರಾವ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಾಫ್ ಮ್ಯಾರಥಾನ್(21 ಕಿ.ಮೀ) ಹಾಗೂ 10 ಕೆ ರನ್(10 ಕಿ.ಮೀ) 16ರಿಂದ 45ವರ್ಷದವರಿಗಾಗಿ ಮುಕ್ತ ವಿಭಾಗದಲ್ಲಿ ಹಾಗೂ 46ರಿಂದ ಮೇಲಿನ ಹಿರಿಯ ವಿಭಾಗದಲ್ಲಿ ನಡೆಯಿತು. ಎರಡರಲ್ಲೂ ಮಹಿಳೆ-ಪುರುಷರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿತ್ತು . ಕಾಲೇಜು, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 5 ಕಿ.ಮೀ, ಹೈಸ್ಕೂಲ್ ಹುಡುಗರಿಗೆ 5 ಕಿ.ಮೀ, ಹುಡುಗಿಯರಿಗೆ 3 ಕಿ.ಮೀ, ಪ್ರಾಥಮಿಕ ಶಾಲಾ ಹುಡುಗರಿಗೆ 3 ಕಿ.ಮೀ, ಹುಡುಗಿಯರಿಗೆ 2 ಕಿ.ಮೀ ಓಟವನ್ನು ಆಯೋಜಿಸಲಾಗಿತ್ತು.
ಮುಕ್ತ ಮತ್ತು ಸ್ಪರ್ಧೇತರ ವಿಭಾಗದಲ್ಲಿ ವಿಶೇಷವಾಗಿ ಆಯೋಜಿಸಲಾದ ‘ನಮ ಬಲಿಪುಗ’ ಮ್ಯಾರಥಾನ್ ಎಲ್ಲರ ಗಮನ ಸೆಳೆಯಿತು.