ಮಂಗಳೂರು,ಫೆ.21 : ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ನಿಟ್ಟೆ ವಿವಿ ಸಹಯೋಗದೊಂದಿಗೆ ‘ನಿಟ್ಟೆ ಮಂಗಳೂರು ಹಾಫ್ ಮ್ಯಾರಥಾನ್ ಹಾಗೂ 10ಕೆ ರನ್’ ಫೆ. 22ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದ.ಕ. ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನಾ ವಿಭಾಗದಲ್ಲಿ ಮ್ಯಾರಥಾನ್ ನಡೆಯಲಿದ್ದು, ಈಗಾಗಲೇ 14,650 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಯುವ ಸಮುದಾಯವನ್ನು ಕ್ರೀಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದ್ದು, ಒಟ್ಟು 5,71,000 ರೂ. ಬಹುಮಾನವನ್ನು ನೀಡಲಾಗುತ್ತದೆ ಎಂದರು.
ಕಾಲೇಜಿನ 4150, ಪ್ರೌಢಶಾಲಾ ವಿಭಾಗದ 4500, ಹಿರಿಯ ಪ್ರಾಥಮಿಕ ಶಾಲೆಯ 3500 ಹಾಗೂ ‘ನಮ ಬಲಿಪುಗ’ ವಿಭಾಗದಲ್ಲಿ 2500 ಮಂದಿ ಸಾರ್ವಜನಿಕರು ಸೇರಿದಂತೆ 14,650 ಜನರು ಮ್ಯಾರಥಾನ್ನಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ದಿನದಂದು ಸಾವಿರಾರು ಮಂದಿ ನೋಂದಣಿ ಮಾಡುವ ನಿರೀಕ್ಷೆ ಇದೆ. ಒಟ್ಟು ಸುಮಾರು 20 ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬೆಳಗ್ಗೆ 6ರಿಂದ 9.30ರವರೆಗೆ ಮ್ಯಾರಥಾನ್ ನಡೆಯಲಿದ್ದು, ಸುನೀಲ್ ಕುಮಾರ್ ಶೆಟ್ಟಿ ಹಾಗೂ ಅಶ್ವಿನಿ ನಾಚಪ್ಪ ಅವರು ಈ ಕಾರ್ಯಕ್ರಮದ ರಾಯಭಾರಿಗಳಾಗಿದ್ದಾರೆ. ಕೆಎಎಎ ಬೆಂಗಳೂರು ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ. ಖಾದರ್, ವಿನಯ ಕುಮಾರ್ ಸೊರಕೆ, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಮಹಾಬಲ ಮಾರ್ಲ, ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಅದಿಲ್ ಸುಮಾರಿವಾಲ, ಶಾಸಕರಾದ ಜೆ.ಆರ್. ಲೋಬೋ, ಮೊಯ್ದೀನ್ ಬಾವ, ವಿ.ಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್, ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಐಜಿಪಿ ಅಮೃತ್ ಪೌಲ್, ಪೊಲೀಸ್ ಆಯುಕ್ತ ಎಸ್. ಮುರುಗನ್, ಜಿ.ಪಂ. ಸಿಇಒ ತುಳಸಿ ಮದ್ದಿನೇನಿ, ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಾಪತಿ ಭಾಗವಹಿಸಲಿದ್ದಾರೆ ಎಂದರು.
ಹಾಫ್ ಮ್ಯಾರಥಾನ್(21 ಕಿ.ಮೀ) ಹಾಗೂ 10 ಕೆ ರನ್(10 ಕಿ.ಮೀ) 16ರಿಂದ 45ವರ್ಷದವರಿಗಾಗಿ ಮುಕ್ತ ವಿಭಾಗದಲ್ಲಿ ಹಾಗೂ 46ರಿಂದ ಮೇಲಿನ ಹಿರಿಯ ವಿಭಾಗದಲ್ಲಿ ನಡೆಯಲಿದೆ. ಎರಡರಲ್ಲೂ ಮಹಿಳೆ-ಪುರುಷರಿಗೆ ಪ್ರತ್ಯೇಕ ವಿಭಾಗವಿದೆ. ಕಾಲೇಜು, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 5 ಕಿ.ಮೀ, ಹೈಸ್ಕೂಲ್ ಹುಡುಗರಿಗೆ 5 ಕಿ.ಮೀ, ಹುಡುಗಿಯರಿಗೆ 3 ಕಿ.ಮೀ, ಪ್ರಾಥಮಿಕ ಶಾಲಾ ಹುಡುಗರಿಗೆ 3 ಕಿ.ಮೀ, ಹುಡುಗಿಯರಿಗೆ 2 ಕಿ.ಮೀ ಓಟವಿದೆ. ಮುಕ್ತ ಮತ್ತು ಸ್ಪರ್ಧೇತರ ವಿಭಾಗದಲ್ಲಿ ‘ನಮ ಬಲಿಪುಗ’ ನಡೆಯಲಿದೆ ಎಂದು ಮಂಜುನಾಥ ಭಂಡಾರಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಯಭಾರಿ ಸುನೀಲ್ ಕುಮಾರ್ ಶೆಟ್ಟಿ, ‘ಲೈಫ್ ಈಸ್ ಕಾಲಿಂಗ್’ನ ಪಿ.ಬಿ.ಮಿತ್ರ, ಅರುಣ್ ರಾವ್ ಉಪಸ್ಥಿತರಿದ್ದರು.