ಮಂಗಳೂರು,ಜ.29 : ಪ್ಲ್ಯಾಸ್ಟಿಕ್ ತ್ಯಾಜ್ಯಗಳನ್ನು ಉತ್ತಮ ಬೆಲೆ ಕೊಟ್ಟು ಖರೀದಿ ಮಾಡಲೆಂದೇ ಕೌಂಟರ್ ತೆರೆಯಲಾಗಿದೆ. ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಹಾಗೂ ವರ್ತಕರ ಸಂಘ (ಸಿಪಿಎಂಟಿಎ) ಮತ್ತು ಮಂಗಳೂರು ಮಹಾನಗರಪಾಲಿಕೆಯ ಸಹಯೋಗ ದೊಂದಿಗೆ ಕದ್ರಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿ ಕ್ ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಆರಂಭವಾಗಿದೆ. ನಗರದ ನಾನಾ ಕಡೆ ಇನ್ನಷ್ಟು ಕೌಂಟರ್ಗಳು ಸ್ಥಾಪನೆಯಾಗಲಿವೆ.
‘ಈ ಕೌಂಟರ್ನಲ್ಲಿ ಪ್ಲಾಸ್ಟಿಕ್ ಮತ್ತು ಇತರ ಒಣ ತ್ಯಾಜ್ಯಗಳಿಗೆ ಮಾಮೂಲಿ ದರಕ್ಕಿಂತ ಹೆಚ್ಚಿನ ಬೆಲೆ ಇಲ್ಲಿ ನೀಡಲಾಗುತ್ತದೆ. ಬಿಸ್ಲರಿಯಂಥ ಖಾಲಿ ಬಾಟಲಿಗಳಿಗೆ ಕೆಜಿಗೆ 15 ರೂ.,ಪ್ಲಾಸ್ಟಿಕ್ ಚೀಲ ಕೆಜಿಗೆ 10 ರೂ., ಪೇಪರ್ ಕೆಜಿಗೆ 8 ರೂ. ಕಾರ್ಟನ್ ಬಾಕ್ಸ್ ಕೆಜಿ 6 ರೂ. ಕೊಡುತ್ತೇವೆ. ಬೇರೆ ಕಡೆಯಾದರೆ ಗ್ರಾಹಕರಿಗೆ ಇಷ್ಟು ರೇಟ್ ಸಿಗುವುದಿಲ್ಲ ಎನ್ನುತ್ತಾರೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಕೇಂದ್ರದ ವ್ಯವಸ್ಥಾಪಕ ಸಾಹುಲ್ ಹಮೀದ್.
ಪರಿಸರಕ್ಕೆ ಮಾರಕವಾಗುವ ಹಾಗೂ ಮಣ್ಣಿನ ಫಲವತ್ತತೆಗೆ ಕಂಟಕವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆ ಮಾಡಿ ಉಪ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ.ಪ್ಲಾಸ್ಟಿಕ್ ತ್ಯಾಜ್ಯದಿಂದ ತೈಲ ಉತ್ಪಾದನೆ, ಅನಿಲ ಉತ್ಪಾದನೆ ಸಾಧ್ಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಗೆ ಕದ್ರಿ ಮಾರ್ಕೆಟ್ನಲ್ಲಿ ಕೇಂದ್ರ ಆರಂಭಿಸಲಾಗಿದೆ. ಅಲ್ಲಿ ಎಲ್ಲ ರೀತಿಯ ಒಣ ತ್ಯಾಜ್ಯಗಳನ್ನು ಖರೀದಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆಜಿಗೆ 15ರಿಂದ 20 ರೂ.ರಂತೆ ಖರೀದಿಸಲಾಗುತ್ತದೆ .
ರಾಜ್ಯದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಷೇಧವಿದ್ದರೂ, ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯನ್ನು ಕರಗಿಸಿ ಅದರಿಂದ ಕೈಗಾರಿಕೆಗೆ ಬಳಸುವ ತೈಲ,ಅಡುಗೆ ಅನಿಲ ಉತ್ಪಾದಿಸುವ ಯಂತ್ರವನ್ನು ಬೈಕಂಪಾಡಿಯಲ್ಲಿ ಸದ್ಯದಲ್ಲೇ ಸ್ಥಾಪಿಸಲಾಗುವುದು. ಸಂಗ್ರಹಿತ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಫರ್ನೇಸ್ ಆಯಿಲ್ ಉತ್ಪಾದನೆಗೆ ಬಳಸಲು ಉದ್ದೇಶವಿದೆ ಎಂದು ಸಿಪಿಎಂಟಿಎ ಅಧ್ಯಕ್ಷ ಬಿ.ಎ,ನಝೀರ್ ಅವರು ಹೇಳುತ್ತಾರೆ