ಮಂಗಳೂರು, ಜ.25: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿಯನ್ನು ವಿರೋಧಿಸಿ ಸಿಪಿಐ ಮತ್ತು ಸಿಪಿಎಂ ದ.ಕ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಶನಿವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಂಟಿ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಸಿಪಿಎಂ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ವಿಶ್ವದ ಯಜಮಾನನಂತೆ ವರ್ತಿಸುತ್ತಿರುವ ಅಮೆರಿಕವು ಮಧ್ಯಪೂರ್ವದ ತೈಲ ರಾಷ್ಟ್ರಗಳ ಮೇಲೂ, ಜಗತ್ತಿನ ದುರ್ಬಲ ರಾಷ್ಟ್ರಗಳ ಮೇಲೂ ವಿವಿಧ ನೆಪಗಳನ್ನೊಡ್ಡಿ ದಾಳಿಗಳನ್ನು ನಡೆಸುತ್ತಾ ಬಂದಿದೆ. ವಿಯೆಟ್ನಾಂ, ಕ್ಯೂಬಾ, ಫೆಲೆಸ್ತಿನ್, ಅಪಫ್ಘಾನಿಸ್ತಾನ್, ಇರಾಕ್, ಸಿರಿಯಾ, ಲಿಬಿಯಾ ಈ ದೇಶಗಳ ಮೇಲೆ ದಿಗ್ಭಂಧನ, ದಾಳಿ, ಭಯೋತ್ಪಾದನೆ ಹರಿಯಬಿಟ್ಟು, ಕೆಲವೆಡೆ ಸರ್ವಾ ಧಿಕಾರವನ್ನು ಸ್ಥಾಪಿಸಲೂ ಕಾರಣ ವಾಗಿದೆ. ಅಮೇರಿಕಾವು ಸ್ಪಷ್ಟವಾಗಿ ಸಾಮ್ರಾಜ್ಯಶಾಹಿ ರಾಷ್ಟ್ರವಾಗಿದ್ದು, ಆ ದೇಶದ ಅಧ್ಯಕ್ಷ ಬರಾಕ್ ಒಬಾಮ ರನ್ನು ಭಾರತ ದೇಶದ ಪ್ರಜಾಪ್ರಭುತ್ವ ದಿನಾಚರಣೆ ಸಂದರ್ಭದಲ್ಲಿ ದೇಶದ ಅತಿಥಿಯಾಗಿ ಆಹ್ವಾನಿಸುತ್ತಿರುವುದು ನಾಚಿಕೆಗೇಡು ಎಂಬುದಾಗಿ ಆರೋಪಿಸಿದರು.
ಸಿಪಿಐ ಪಕ್ಷದ ದ.ಕ ಜಿಲ್ಲಾ ಕಾರ್ಯದರ್ಶಿ ಪಿ. ಸಂಜೀವ ಮಾತ ನಾಡಿ, ಅಮೆರಿಕವು ಭಾರತ ಮತ್ತು ಪಾಕಿಸ್ತಾನಗಳು ಸ್ನೇಹದಿಂದ ಇರಬಾರದೆಂದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ನೆರವನ್ನೂ ಕೊಡುತ್ತಿದೆ ಎಂದರು.
ಸಿಪಿಐ ನಾಯಕರಾದ ವಿ. ಕುಕ್ಯಾನ್, ಎಚ್.ವಿ. ರಾವ್, ಕರುಣಾಕರ, ಶೇಖರ್, ಸಿಪಿಎಂ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಯು.ಬಿ.ಲೋಕಯ್ಯ, ಸುನೀಲ್ಕುಮಾರ್ ಬಜಾಲ್, ಕೃಷ್ಣಪ್ಪ ಸಾಲ್ಯಾನ್, ಕೃಷ್ಣಪ್ಪ ಕೊಂಚಾಡಿ, ಎಸ್.ಎಂ. ಶಿವಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿಪಿಎಂನ ಜೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಸಿಪಿಐನ ಸುರೇಶ್ ವಂದಿಸಿದರು.