ಮಂಗಳೂರು,ಜ.21: ಮಂಗಳೂರು ಬಳ್ಳಾಲ್ಬಾಗ್ನ ಗುರ್ಜಿ ದೀಪೋತ್ಸವ ಸಮಿತಿಯ ವತಿಯಿಂದ ಮಂಗಳೂರಿನ ಬಳ್ಳಾಲ್ಬಾಗ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ಧುರೀಣ ದಿ. ಎಂ. ಲೋಕಯ್ಯ ಶೆಟ್ಟಿಯವರ ಸಂಸ್ಮರಣಾರ್ಥ ಅವರ ಹೆಸರಿನಲ್ಲಿ ನೂತನವಾಗಿ ನಿರ್ಮಿಸಲಾದ ವೃತ್ತವನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು. ಜೊತೆಗೆ ಜಿಲ್ಲೆಯ ನೆಚ್ಚಿನ ಮಾಜಿ ಶಾಸಕ ದಿವಂಗತ ಲೋಕಯ್ಯ ಶೆಟ್ಟಿಯವರ ಪ್ರತಿಮೆಯನ್ನೂ ಕೂಡ ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿದೆ.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ನವೀಕೃತ ವೃತ್ತವನ್ನು ಉದ್ಘಾಟಿಸಿದರು . ವೃತ್ತದಲ್ಲಿ ಕುಸ್ತಿ ಪ್ರತಿಮೆಯನ್ನು ಕೂಡಾ ಸ್ಥಾಪಿಸಲಾಗಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್, ವಿನಯ್ ಹೆಗ್ಡೆ ಪ್ರತಿಮೆಯನ್ನು ಅನಾವರಣಗೊಳಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಲೋಕಯ್ಯ ಶೆಟ್ಟಿವರು ಆದರ್ಶ ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ಧುರೀಣ-ಕುಸ್ತಿಕಲಾ ಪೋಷಕ ಹಾಗೂ ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಅವರು ಜಿಲ್ಲೆಗೆ ನೀಡಿದ ಕೊಡುಗೆಗಳು ಅಪಾರ ಹಾಗೂ ಅವರು ಮಾಡಿದ ಸಾಧನೆಗಳನ್ನು ಬಣ್ಣಿಸಿದರು.
ಕೆಂಪುಕಲ್ಲಿನ ಮೂಲಕ ಆಕರ್ಷಕ ವಿನ್ಯಾಸದಲ್ಲಿ ವೃತ್ತವನ್ನು ರಚಿಸಲಾಗಿದ್ದು . ವೃತ್ತದ ಮಧ್ಯದಲ್ಲಿ ಹಸಿರು ಗಿಡಗಳನ್ನು ನೆಡಲಾಗಿದ್ದು, ನಗರದ ಸೌಂದರ್ಯಕ್ಕೆ ಈ ವೃತ್ತ ಇನ್ನಷ್ಟು ಮೆರಗನ್ನು ನೀಡುತ್ತಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ, ಎ.ಜೆ ಶೆಟ್ಟಿ, ಅಜಿತ್ಕುಮಾರ್ ರೈ ಮಾಲಾಡಿ, ಡಾ. ವಿಜಯ್ಪ್ರಕಾಶ್, ಮೋನಪ್ಪ ಭಂಡಾರಿ, ಗಣೇಶ್ ಹೊಸಬೆಟ್ಟು, ಗುರ್ಜಿ ದೀಪೋತ್ಸವ ಸಮಿತಿ ಅಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.