ಕುಂದಾಪುರ: ಕಳೆದ ಒಂದು ವಾರಗಳ ಹಿಂದೆ ಕುಂದಾಪುರದ ಕೋಡಿ ಹಾಗೂ ಹಳೆಅಳಿವೆ ಭಾಗದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ಕೋಮುಗಳ ಮುಖಂಡರ ಜೊತೆ ಕುಂದುಕೊರತೆಗಳ ಸಭೆಯು ಮಂಗಳವಾರ ಬೆಳಿಗ್ಗೆ ಕುಂದಾಪುರ ತಹಶಿಲ್ದಾರ್ ಕಛೇರಿಯಲ್ಲಿ ನಡೆಯಿತು.
ಕೋಡಿ ಭಾಗದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಪೊಲೀಸ್ ಹೊರಠಾಣೆಯನ್ನು ಅಗತ್ಯವಾಗಿ ತೆರೆಯುವುದು, ಕೋಡಿಯ ಪ್ರಮುಖ ರಸ್ತೆಗಳಲ್ಲಿ ಹಂಪ್ ಅಳವಡಿಕೆ, ನಿತ್ಯ ಪೊಲೀಸರನ್ನು ನಿಯೋಜಿಸುವುದು ಹಾಗೂ ಚೆಕ್ ಪೋಸ್ಟ್ ರಚನೆ ಬಗ್ಗೆ ಈ ಸಭೆಯಲ್ಲಿ ಮುಖಂಡರುಗಳಿಂದ ಬೇಡಿಕೆ ಬಂದಿತ್ತು.
ಇನ್ನು ಕೋಡಿ ಹಾಗೂ ಅಳೆಅಳಿವೆ ಪ್ರದೇಶದಲ್ಲಿ ತ್ಯಾಜ್ಯ ಸಮಸ್ಯೆ ವಿಪರೀತವಾಗಿದ್ದು, ಅವರವರ ಮನೆಯ ಕಸ ಮೊದಲಾದ ತ್ಯಾಜ್ಯಗಳನ್ನು ತಾವೇ ವಿಲೇವಾರಿ ಮಾಡಿಕೊಳ್ಳಬೇಕು, ಸಮುದ್ರ ಕಿನಾರೆಗೆ ಎಸೆಯುವುದು ಸರಿಯಲ್ಲ, ಈ ಬಗ್ಗೆ ಗಮನವಹಿಸಬೇಕು ಎಂಬುದಗಿ ನಾಗರೀಕರಲ್ಲಿ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಮನವಿ ಮಾಡಿಕೊಂಡರು.
9 ಗಂಟೆ ಬಳಿಕ ಗುಂಪು ಸೇರುವುದು ಸರಿಯಲ್ಲ, ಇದರಿಂದ ಯಾರೋ ಮಾಡುವ ಕಿಡಿಗೇಡಿತನಕ್ಕೆ ಎಲ್ಲರೂ ಶಿಕ್ಷೆ ಅನುಭವಿಸಬೇಕಾಗುತ್ತದೆ, ಕೋಡಿ ಪ್ರದೇಶದಲ್ಲಿ ಬ್ಯಾನರ್ ಅಳವಡಿಕೆಗೆ ಅನುಮತಿ ಪಡೆದುಕೊಳ್ಳಬೇಕು, ಅನುಮತಿ ದಿನದ ಬಳಿಕ ಬ್ಯಾನರ್ ತೆರವು ಮಾಡಬೇಕು ಎಂದರು.
ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಾಗ್ರತೆವಹಿಸಬೇಕು ಈ ನಿಟ್ಟಿನಲ್ಲಿ ಉಭಯ ಮುಖಂಡರು ಹಾಗೂ ನಾಗರೀಕರು ಇಲಾಖೆಯೊಂದಿಗೆ ಸಹಕರಿಸಬೇಕು. ಶಾಂತಿ ಹಾಗೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು.
ಈ ಸಂದರ್ಭದಲ್ಲಿ ಕುಂದಾಪುರ ವೃತ್ತನಿರೀಕ್ಷಕ ದಿವಾಕರ ಪಿ.ಎಂ, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೀಯಾನ್, ತಾ.ಪಂ. ಸದಸ್ಯ ಮಂಜು ಬಿಲ್ಲವ, ಜಾನಕಿ ಬಿಲ್ಲವ, ನಾಗರಾಜ್, ಸ್ಥಳೀಯ ಮುಸ್ಲೀಂ ಮುಖಂಡರಾದ ಅಬ್ದುಲ್ ಕೋಡಿ, ಕೆ.ಎಂ.ಹುಸೇನ್, ಅಬ್ದುಲ್ ರೌಫ್, ಮಹಮ್ಮದ್ ಅಲಿ, ಮೊಹಮ್ಮದ್, ಕೆ.ಎಚ್. ಇಬ್ರಾಂಹಿಂ, ಕೆ.ಎಚ್. ಹೆಸೇನ್, ಜಿ.ಅಬ್ದುಲ್ಲಾ, ಮಹಮ್ಮದ್ ಗಡಿ ಮೊದಲಾದವರಿದ್ದರು.